ಕಾಪು: ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚನೆ; ದೂರು ದಾಖಲು

ಕಾಪು: ಪರಿಚಯಸ್ಥನಿಂದಲೇ ಮಹಿಳೆಯೊಬ್ಬರು ವಂಚನೆಗೊಳಗಾದ ಘಟನೆ ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಉಚ್ಚಿಲ ನಿವಾಸಿ ಮುಮ್ತಾಜ್‌ ವಂಚನೆಗೆ ಒಳಗಾದ ಮಹಿಳೆ. ಇವರಿಗೆ ಪರಿಚಯದವನಾದ ಆರೋಪಿ ಅನ್ವರ್‌ ಸಾಲ ಕೊಡಿಸುವುದಾಗಿ ಭರವಸೆ ನೀಡಿ, ಉಡುಪಿ ಉಜ್ವನ್‌ ಬ್ಯಾಂಕ್‌ನಲ್ಲಿ ಮುಮ್ತಾಜ್‌ ಅವರ ಬ್ಯಾಂಕ್‌ ಖಾತೆಯನ್ನು ತೆರೆಸಿದ್ದನು. ಮೊದಲೇ ತಿಳಿಸಿದ್ದಂತೆ 15,000 ರೂ. ಶುಲ್ಕ, ಸಾಲದ ಹಣ ಹಾಗೂ ದಾಖಲೆಗಳ ತಯಾರಿಕೆ ವೆಚ್ಚವನ್ನು ಮುಮ್ತಾಜ್ ಆತನಿಗೆ ನೀಡಿದ್ದರು. ಎಲ್ಲ ಹಣವನ್ನು ನೀಡಿ ಒಂದು ವಾರ ಆದರೂ ಮುಮ್ತಾಜ್‌ ಅವರ ಬ್ಯಾಂಕ್‌ ಖಾತೆಗೆ ಹಣ ನೀಡದೆ ಮೂರು ತಿಂಗಳವರೆಗೂ ಹೀಗೆನೇ ಸತಾಯಿಸಿದ್ದನು.

ಮುಮ್ತಾಜ್‌ ಅವರು ತಾನು ಈಗಾಗಲೇ ನೀಡಿರುವ 35,000 ರೂ. ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದು, ಆತ ಚೆಕ್‌ ಮತ್ತು ಹಣವನ್ನು ನೀಡಿರುವುದಿಲ್ಲ. ಅದೇ ವಿಚಾರಕ್ಕೆ ಸಂಬಂಧಿಸಿ 2 ನೇ ಆರೋಪಿ ಮಿನಾಜ್‌ ಹಾಗೂ 1 ನೇ ಆರೋಪಿ ಅನ್ವರ್‌ನ ಅಣ್ಣನ ಹೆಂಡತಿ, ಮುಮ್ತಾಜ್‌ ಅವರ ತಾಯಿಯ ಮನೆಯಾದ ಕೊಪ್ಪಲಂಗಡಿಗೆ ಹೋಗಿ ಅಲ್ಲಿ ಬೆದರಿಕೆಯೊಡ್ಡಿದ್ದು, ಚೆಕ್‌ ಬೇಕಾದಲ್ಲಿ 45,000 ರೂ. ನೀಡಬೇಕು ಎಂದು ಬೆದರಿಕೆ ಹಾಕಿದ್ದರು.

ಈ ಬಗ್ಗೆ ಮುಮ್ತಾಜ್‌ ಅವರು ಅನ್ವರ್‌ ಮತ್ತು ಆತನ ಜತೆಗಿದ್ದವರು ತಮ್ಮ ಚೆಕ್‌ ಅನ್ನು ಹಿಡಿದು ದುರ್ಬಳಕೆ ಮಾಡಿ, ಮೋಸ ಮಾಡಿರುವುದಾಗಿ ನ್ಯಾಯಾಲಯದ ಮೂಲಕ ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.