ಹಿಜಾಬ್ ಜಿಹಾದಿ ಷಡ್ಯಂತ್ರ; ಪ್ರಕರಣವನ್ನು ಎನ್ ಐಎ ತನಿಖೆಗೆ ಒಳಪಡಿಸಿ; ಬಜರಂಗದಳ ಒತ್ತಾಯ

ಹಿಜಾಬ್ ಜಿಹಾದ್ ಷಡ್ಯಂತ್ರ ಮುಸ್ಲಿಮ್ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿಕೊಂಡು ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ.

ಈ ಪ್ರಕರಣದ ಹಿಂದೆ PFI, SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ಅಲ್ಲದೇ ಇದರ ಹಿಂದೆ ಪಾಕಿಸ್ತಾನ, ತಾಲಿಬಾನ್ ನಂತಹ ಮೂಲಭೂತವಾದಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಹೇಳಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿವಾದದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ಬಜರಂಗದಳ ನಿರಂತರವಾಗಿ ದೇಶದ ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದು, ಈ ರೀತಿಯ ದೇಶ ಒಡೆಯುವ ಕೆಲಸವನ್ನು ಮಾಡುವಂತಹ ಜಿಹಾದಿ ಶಕ್ತಿಗಳ ವಿರುದ್ಧ ಯಾವುದೇ ಉಗ್ರ ಹೋರಾಟ ಮಾಡಲು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್ ಪ್ರಕರಣವನ್ನು ಆರಂಭಿಸಿದ 6 ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನೂ ರೂಪಿಸಿದವರ ವಿರುದ್ಧ NIA ಮುಖಾಂತರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲ್ಕಡ್, ಜಿಲ್ಲಾ ಸಹಕಾರ್ಯದರ್ಶಿ ಸುಧೀರ್, ಬಜರಂಗದಳದ ಸಂಚಾಲಕ ಸುರೇಂದ್ರ ಕೋಟೇಶ್ವರ, ಜಿಲ್ಲಾ ಮಾತೃ ಶಕ್ತಿಯ ಪ್ರಮುಖ್ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.