ಕೋವಿಡ್ ಸಹಾಯಧನ: ಕಟ್ಟಡ ಕಾರ್ಮಿಕರ ಮಾಹಿತಿ ಅಪ್‌ಡೇಟ್ ಮಾಡಲು ಸೂಚನೆ

ಉಡುಪಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಲಾದ ಕೋವಿಡ್ -19 ಎರಡನೇ ಅಲೆಯ ಸಹಾಯಧನ ಮೊತ್ತ 3000 ರೂ. ಗಳನ್ನು ನೇರ ನಗದು ವರ್ಗಾವಣೆ ಮೂಲಕ ಶೇಕಡಾ 90 ರಷ್ಟು ಈಗಾಗಲೇ ಪಾವತಿ ಮಾಡಲಾಗಿದ್ದು, ಶೇ. 10 ರಷ್ಟು ಡೇಟಾದಲ್ಲಿ ಫಲಾನುಭವಿ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಖಾತೆಗೆ ಜೋಡಣೆ ಆಗದ ಹಾಗೂ ಬ್ಯಾಂಕ್‌ನವರು ಖಾತೆಯನ್ನು ಎನ್.ಪಿ.ಸಿ.ಐ ಗೆ ಮ್ಯಾಪಿಂಗ್ ಮಾಡದೇ ಇರುವ ಕಾರಣ ಅವರ ಖಾತೆಗೆ ಸಹಾಯಧನ ಪಾವತಿಯಾಗಿರುವುದಿಲ್ಲ.

ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆ ಆಗದ ಹಾಗೂ ಬ್ಯಾಂಕ್‌ನವರು ಬ್ಯಾಂಕ್ ಖಾತೆಯನ್ನು ಎನ್.ಪಿ.ಸಿ.ಐ ಗೆ ಮ್ಯಾಪಿಂಗ್ ಮಾಡದೇ ಇರುವ ಮಾಹಿತಿಯು ಮಂಡಳಿಯ ಜಾಲತಾಣದಲ್ಲಿ ಲಭ್ಯವಿದೆ.

ಸಹಾಯಧನ ದೊರಕದ ಫಲಾನುಭವಿಗಳು ಮಾಹಿತಿಯನ್ನು ಮಂಡಳಿಯ ಜಾಲತಾಣದಲ್ಲಿ ಅಪ್‌ಡೇಟ್ ಮಾಡಲು ಜನವರಿ 31 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.