ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷ ರಾಜಕೀಯದ ಕೈಗನ್ನಡಿ; ವೆರೋನಿಕಾ ಕರ್ನೇಲಿಯೋ

ಉಡುಪಿ: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮುಖ್ಯಮಂತ್ರಿಗೆ ಸಲಹೆ ಮಾಡಿರುವುದು ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭಿಸಿದ್ದು, ಉತ್ತಮ ಸೇವೆ‌ ನೀಡುತ್ತಿದೆ. ಸಿದ್ದರಾಮಯ್ಯ ಅವರ ದೂರದೃಷ್ಟಿಯ ಫಲವಾಗಿ ಬಡವರು ಮತ್ತು ಮಧ್ಯಮ ವರ್ಗದವರು ಕನಿಷ್ಠ ಹಣದಲ್ಲಿ ಉತ್ತಮ ಆಹಾರ ಪಡೆಯುವ ಯೋಜನೆಗೆ ಇಂದಿರಾ ಕ್ಯಾಂಟಿನ್‌ ಎಂದು ಹೆಸರಿಟ್ಟಿರುವುದು ಬಿಜೆಪಿಗರ ಕಣ್ಣು ಕುಕ್ಕುವಂತಾಗಿದೆ.
ಬಡವರಿಗೆ ಆಹಾರ ನೀಡುವ ಸಲುವಾಗಿ ಇಂದಿರಾ ಕ್ಯಾಂಟಿನ್‌ ಆರಂಭಿಸಿದಾಗಲೂ ಕೂಡ ಕೊಂಕು ನುಡಿದಿದ್ದ ಬಿಜೆಪಿ ಈಗ ಹೆಸರಿನ ವಿಚಾರದಲ್ಲಿ ವಿರೋಧ ಮಾಡಿಕೊಂಡು ಬಂದಿರುವುದು ದೇಶಕ್ಕೆ ಕೊಡುಗೆ ನೀಡಿದವರ ಬಗ್ಗೆ ಯಾವ ರೀತಿಯ ಭಾವನೆ ಹೊಂದಿದೆ ಎನ್ನುವುದನ್ನು ತೋರಿಸುತ್ತದೆ.

ಇಂದಿರಾಗಾಂಧಿ ಪ್ರಧಾನಿಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದ ಎಲ್ಲೆಡೆ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿದ್ದರು. ಇದರಿಂದ ಬಹುತೇಕ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ ಅನುಕೂಲವಾಗಿದೆ. ಕ್ಯಾಂಟೀನ್‌ ಹೆಸರನ್ನು ಬದಲಿಸಲು ಹೊರಟಿರುವುದು ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಟಿ ರವಿಯವರಿಗೆ ನಿಜವಾಗಿ ಕಾಳಜಿ ಇದ್ದರೆ ಮೋದಿ ಹೆಸರಿನಲ್ಲಿ ನಾಮಕರಣ ಮಾಡಿರುವ ಕ್ರೀಡಾಂಗಣಕ್ಕೆ ಕ್ರೀಡಾಳುಗಳ ಹೆಸರನ್ನು ಇಡುವಂತೆ ಪ್ರಯತ್ನ ಪಡಲಿ ಹೊರತು ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್‌ ನಾಯಕರ ಹೆಸರನ್ನು ಬದಲಿಸುವ ಮೂಲಕ ದ್ವೇಷ ರಾಜಕಾರಣ ಮಾಡುವುದುನ್ನು ಕೈ ಬಿಡಲಿ ಎಂದು ಅವರು ಆಗ್ರಹಿಸಿದ್ದಾರೆ.