ಟೀಂ ಇಂಡಿಯಾದ ಆಟಗಾರ ಕೃಣಾಲ್ ಪಾಂಡ್ಯಗೆ ಕೋವಿಡ್‌ ದೃಢ: ಇಂದು ನಡೆಯಬೇಕಿದ್ದ ಎರಡನೇ ಟಿ20 ಪಂದ್ಯ ಮುಂದೂಡಿಕೆ

ಕೊಲಂಬೊ: ಭಾರತ ಕ್ರಿಕೆಟ್‌ ತಂಡದ ಆಲ್‌–ರೌಂಡರ್‌ ಕೃಣಾಲ್ ಪಾಂಡ್ಯ ಅವರಿಗೆ ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಕೊಲಂಬೊದ ಆರ್‌. ಪ್ರೇಮದಾಸಾ ಕ್ರೀಡಾಂಗಣದಲ್ಲಿ ಇಂದು ಶ್ರೀಲಂಕಾ ಎದುರು ನಡೆಯಬೇಕಿದ್ದ ಎರಡನೇ ಟಿ20 ಪಂದ್ಯವನ್ನು ಮುಂದೂಡಲಾಗಿದೆ.

ಸೋಮವಾರವೇ ಕೃಣಾಲ್‌ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಟೂರ್ನಿಯಲ್ಲಿ ಭಾಗಿಯಾಗಿರುವ ಎಲ್ಲರ ಆರ್‌ಟಿ–ಪಿಸಿಆರ್‌ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಭಾರತ ತಂಡದಲ್ಲಿರುವ ಇತರರ ಆರ್‌ಟಿ–ಪಿಸಿಆರ್‌ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇಂದು ಸಂಜೆ ಕೋವಿಡ್‌ ಫಲಿತಾಂಶ ಬರಲಿದ್ದು, ಎಲ್ಲರಲ್ಲೂ ಕೋವಿಡ್‌ ನೆಗೆಟಿವ್‌ ಇರುವುದಾಗಿ ಬಂದರೆ ಎರಡನೇ ಟಿ20 ಪಂದ್ಯವು ಬುಧವಾರವೇ ನಡೆಯಲಿದೆ ಎಂದು ಹೇಳಿದ್ದಾರೆ.