ಅಸ್ಸಾಂ-ಮಿಜೋರಾಂ ಗಡಿ ಸಂಘರ್ಷ: ಆರು ಪೊಲೀಸರ ಹತ್ಯೆ

ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯದ ಮಧ್ಯೆ ಗಡಿ ಸಂಘರ್ಷ ಉಂಟಾಗಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ಮತ್ತು ಕಲ್ಲುತೂರಾಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎರಡು ರಾಜ್ಯಗಳ ನಡುವಿನ ಗಡಿ ಸಂಘರ್ಷ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನದಲ್ಲಿ ಈ ಹಿಂಸಾಚಾರ ನಡೆದಿದೆ. ದಕ್ಷಿಣ ಅಸ್ಸಾಂನ ಕಚಾರ್ ಜಿಲ್ಲೆ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳು ಗಡಿ ಹಂಚಿಕೊಂಡಿವೆ. ಅಂತರರಾಜ್ಯ ಗಡಿಯಲ್ಲಿರುವ ಅಸ್ಸಾಂನ ಗಡಿಠಾಣೆಯ ಬಳಿ ಘರ್ಷಣೆ ನಡೆದಿದೆ.

ಈ ಘಟನೆ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ವಾಗ್ವಾದ ನಡೆಸಿದ್ದಾರೆ.

ಅಸ್ಸಾಂನ 200ಕ್ಕೂ ಹೆಚ್ಚು ಪೊಲೀಸರು ನಮ್ಮ ಗಡಿಯೊಳಗೆ ಇರುವ ಆಟೊರಿಕ್ಷಾ ನಿಲ್ದಾಣಕ್ಕೆ ಬಂದು, ಅಲ್ಲಿದ್ದ ಮಿಜೋರಾಂ ಪೊಲೀಸರನ್ನು ಒತ್ತಾಯಪೂರ್ವಕವಾಗಿ ಹಿಮ್ಮೆಟ್ಟಿಸಿದ್ದಾರೆ. ವಾಹನಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಮಾಥಂಗಾ ಅವರು ಹೇಳಿದ್ದಾರೆ.

ನಮ್ಮ ಪೊಲೀಸ್ ಗಡಿಠಾಣೆಯನ್ನು ಮಿಜೋರಾಂ ಪೊಲೀಸರು ಆಕ್ರಮಿಸಿಕೊಂಡಿದ್ದರು. ಅದನ್ನು ಮರಳಿ ನಿಯಂತ್ರಣಕ್ಕೆ ತೆಗದುಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಸಂಘರ್ಷ ನಡೆದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.