ಕಾರ್ಕಳ: ಜಾಗತಿಕ ಅನುದಾನ ಯೋಜನೆ ಉದ್ಘಾಟನೆ

ಕಾರ್ಕಳ: ರೋಟರಿ ಕ್ಲಬ್ ಮಣಿಪಾಲದ ಮಹಾತ್ವಕಾಂಕ್ಷೆ ಜಾಗತಿಕ ಅನುದಾನ (Global Grant) ಯೋಜನೆಯಾದ “ಸಮುದಾಯ ಮಧುಮೇಹ ತಡೆಗಟ್ಟುವಿಕೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಜಾಗೃತಿ ಕಾರ್ಯಕ್ರಮವನ್ನು ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ರೋಟರಿ ಜಿಲ್ಲಾ 3182 ನ ಗವರ್ನರ್ ರಾಜಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮುದಾಯ ಮಧುಮೇಹ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರಗಳನ್ನು ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಭಾಗವಾಗಿ ₹25 ಲಕ್ಷ ಮೌಲ್ಯದ 3 ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ 3182 ನ ಚುನಾಯಿತ ಗವರ್ನರ್ ಡಾ. ಎಚ್. ಜಯಗೌರಿ, ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಪ್ರಶಾಂತ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರೋಟರಿ ಪೂರ್ವ ಜಿಲ್ಲಾ ಗವರ್ನರ್ ಡಾ ಭರತೇಶ್ ಅಧಿರಾಜ್, ಕಸ್ತೂರ್ಬಾ ಆಸ್ಪತ್ರೆ  ಮಣಿಪಾಲದ ಮೂತ್ರ ಪಿಂಡ ವಿಭಾಗದ ಮುಖ್ಯಸ್ಥ ಡಾ ಶಂಕರ್ ಪ್ರಸಾದ್ ಮತ್ತು ಪ್ರಾಧ್ಯಾಪಕ ಡಾ ರವೀಂದ್ರ ಪ್ರಭು, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ  ಕಾರ್ಕಳದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಹಾಗೂ ವರ್ಚುವಲ್ ಮೂಲಕ ಅನೇಕ ರೋಟರಿ ಗಣ್ಯರು ಭಾಗವಹಿಸಿದ್ದರು.

ಜುಲೈ 6ರಿಂದ ಡಯಾಲಿಸಿಸ್ ಸೌಲಭ್ಯ ಆರಂಭ:
ಮಂಗಳವಾರದಿಂದ (ಜುಲೈ 6) ಜಾರಿಗೆ ಬರುವಂತೆ  ಮೂತ್ರಪಿಂಡ ವಿಭಾಗದ ಹೊರರೋಗಿ ವಿಭಾಗ ಮತ್ತು ಡಯಾಲಿಸಿಸ್ ಸೌಲಭ್ಯವನ್ನು ಆರಂಭಿಸಲಾಗುವುದು. ಈ   ವಿಭಾಗವು ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ ಗಂಟೆ 2ರಿಂದ ಸಂಜೆ 5ರ ವರಗೆ ಕಾರ್ಯನಿರ್ವಹಿಸಲಿದೆ. ಡಯಾಲಿಸಿಸ್ ಸೌಲಭ್ಯವು ಪ್ರತೀ ದಿನ ದೊರೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಕೀರ್ತಿನಾಥ ಬಲ್ಲಾಳ  ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 97316 01149 ಅಥವಾ 08258 230583 ಸಂಪರ್ಕಿಸಬಹುದು.