ಉಡುಪಿ: ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ; ಸ್ವರ್ಣಾನದಿಗೆ ಆರತಿ ಬೆಳಗಿದ ಪೇಜಾವರ ಶ್ರೀಪಾದರು

ಉಡುಪಿ: ಮಣಿಪಾಲ ಪೆರಂಪಳ್ಳಿ ಸಮೀಪ ಶೀಂಬ್ರ ಸ್ವರ್ಣಾ ನದಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಆರತಿ ಬೆಳಗಿಸುವ ಮೂಲಕ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ ಇಂದು ನೆರವೇರಿತು.

ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಚಿಂತನೆಯೊಂದಿಗೆ ನಡೆದ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆರತಿಗಳನ್ನು ಬೆಳಗಿ ಸ್ವರ್ಣೆಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಉಡುಪಿಯ ಸಮಸ್ತ ಜನತೆಗೆ ಕರೆ ನೀಡಿದರು.

ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ , ದೇವಳದ ವ್ಯವಸ್ಥಾಪಕ ಕೃಷ್ಣಮೂರ್ತಿ ಶಿವತ್ತಾಯ, ಅರ್ಚಕ ನವೀನ್ ಶಿವತ್ತಾಯ, ಇಂಜಿನಿಯರ್ ರಮೇಶ್ ರಾವ್, ಎಂ. ರಘುರಾಮಾಚಾರ್ಯ, ನಗರಸಭಾ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ಪ್ರಭಾಕರ ಭಟ್, ಪ್ರಶಾಂತ್ ಭಟ್, ಶಶಾಂಕ್ ಶಿವತ್ತಾಯ, ವಾಸುದೇವ ಭಟ್, ನಾಗರಾಜ ಶಿವತ್ತಾಯ, ಹರಿಕೃಷ್ಣ ಶಿವತ್ತಾಯ, ಶಂಕರ್ ಕುಲಾಲ್, ಗಣಪತಿ ಭಟ್, ಶ್ಯಾಮ್ ಕುಡ್ವ ಮೊದಲಾದವರು ಕಾರ್ಯಕ್ರಮ ಸಂಯೋಜಿಸಿದರು.

ಸ್ಥಳೀಯ ಭಜನಾಮಂಡಳಿಯ ಸದಸ್ಯರ ಭಜನೆ ,ಯುವಕರ ಚಂಡೆವಾದನ , ತೇಲುವ ತೆಪ್ಪದಲ್ಲಿ ವಿದುಷಿ ಪವನಾ ಬಿ ಆಚಾರ್ಯರ ವೀಣಾವಾದನ , ನೂರಾರು ಸಾಲು ದೀಪಗಳು ಕಾರ್ಯಕ್ರಮದ ಆಕರ್ಷಣೆಗಳಾಗಿತ್ತು. ತಾಯಿ ಭಾರತಿಯ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆಗೈದರು .