ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ

ಕುಂದಾಪುರ: ರಾಜ್ಯಾದ್ಯಂತ ದೇವರ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದರ್ಶನಕ್ಕೆ ಬರುವ ಭಕ್ತರಿಂದಾಗಿ ಸೋಂಕು ಹರಡದಂತೆ ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ದೇಗುಲದ ಹೊರ ಪೌಳಿಯ ಮುಖ್ಯ ದ್ವಾರದಿಂದ ಒಳ ಪ್ರವೇಶಿಸುವ ಭಕ್ತರು ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು ಲೋಹ ಶೋಧಕ ಯಂತ್ರದ ಮೂಲಕ ಒಳ ಪ್ರವೇಶಿಸಿದ ಬಳಿಕ, ಕೈ ಗಳಿಗೆ ಸ್ಯಾನಿಟೈಸೇಶನ್ ಮಾಡಿದ ಬಳಿಕ ಸರದಿ ಸಾಲಿನಲ್ಲಿ ಅಂತರವನ್ನು ಕಾಯ್ದುಕೊಂಡು ಗರ್ಭಗುಡಿಯ ಎದುರಿನ ಮುಖ್ಯ ದ್ವಾರದ ಮೂಲಕ ದೇವಿಯ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಿರುವುದರಿಂದ ದೇವರ ಗರ್ಭಗುಡಿಯ ತನಕ ಅವಕಾಶ ನಿರಾಕರಿಸಲಾಗಿದ್ದು, ದ್ವಜಸ್ತಂಭದವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ ಮುಂಜಾನೆಯಿಂದಲೇ ಪೂಜಾ ವಿಧಿ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ,  ಮೊದಲ ದಿನ ನಿರೀಕ್ಷೆಯ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ. ಸೋಮವಾರ ದರ್ಶನ ಪಡೆದವರಲ್ಲಿ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾಣಿಸಲಿಲ್ಲ. ದರ್ಶನವಲ್ಲದೆ ಇತರ ಸೇವೆ, ತೀರ್ಥ ಪ್ರಸಾದಕ್ಕೆ ಅವಕಾಶವಿರಲಿಲ್ಲ.