ಅರ್ಚಕರ ಸಂಕಷ್ಟ ಪರಿಹರಿಸಲು ಮುಂದಾದ ಮುಜರಾಯಿ ಇಲಾಖೆ: 34 ಸಾವಿರ ಅರ್ಚಕರಿಗೆ ದಿನಸಿ ಕಿಟ್: ಸಚಿವ ಕೋಟ

ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳ ಅರ್ಚಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ಮುಜರಾಯಿ ಇಲಾಖೆ ಅರ್ಚಕರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಅವರ ಸಂಕಷ್ಟಕ್ಕೆ ಪರಿಹಾರ ನೀಡಲು ಮುಂದಾಗಿದೆ.
ರಾಜ್ಯದ 34 ಸಾವಿರ ಅರ್ಚಕರಿಗೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲು ನಿರ್ಧರಿಸಲಾಗಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮೂಲಕ ಕಿಟ್ ವಿತರಣೆ ಕಾರ್ಯ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜಿಲ್ಲೆಯ ಒಂದು ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಿಟ್ ವಿತರಣೆ ನಡೆಯಲಿದೆ. ಅರ್ಚಕರಿಗೆ ಪ್ರೋತ್ಸಾಹಧನ ನೀಡುವ ವಿಚಾರದ ಕುರಿತು ಸಿಎಂ ಜತೆಗೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ ರಾಜ್ಯದ 210 ಎ ದರ್ಜೆ ದೇಗುಲಗಳಲ್ಲಿ ಏಳು ಲಕ್ಷ ಜನರಿಗೆ ಪ್ರತಿದಿನ ಊಟ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವ ಕೋಟ ಮಾಹಿತಿ ನೀಡಿದರು.