ಆಳ್ವಾಸ್‌ನಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಮೂಡುಬಿದಿರೆ: ಜನವರಿ ೨ ರಿಂದ ೬ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ನಡೆಯಲಿರುವ ೮೦ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಫ್‌ಗೆ ಚಾಲನೆ ನೀಡಲಾಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಕ್ರೀಡೆಯು ಕೇವಲ ಪಠ್ಯೇತರ ಚಟುವಟಿಕೆಯಲ್ಲ ಬದಲಾಗಿ ಶಿಕ್ಷಣದ ಒಂದು ಭಾಗ. ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿಯಾಗಿ ಬೆಳೆಸಬೇಕು. ಮುಂಬರುವ ದಿನಗಳಲ್ಲಿ ಸೀಮಿತ ಅವಧಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು, ಭಾರತೀಯ ಕ್ರೀಡಾಪಟುಗಳನ್ನು ಸಧೃಢವಾಗಿ ಬೆಳೆಸಬೇಕು ಎಂದರು.

ನ್ಯೂ ಇಂಡಿಯಾ ನಿರ್ಮಾಣದೊಂದಿಗೆ ಫಿಟ್ ಇಂಡಿಯಾ ಎಂಬ ಹೊಸ ಆಂದೋಲನವು ಭಾರತೀಯರಲ್ಲಿ ಆರೋಗ್ಯದ ಅರಿವನ್ನು ಇನ್ನಷ್ಟು ಹೆಚ್ಚಿಸಲಿದೆ. ಕೇವಲ ಕ್ರೀಡೆಗಾಗಿ ಮಾತ್ರವಲ್ಲದೇ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ಕ್ರೀಡಾಳುವನ್ನು ಗೌರವದಿಂದ ಕಾಣಬೇಕೆಂದು ಹೇಳಿದರು. ಕೇಂದ್ರ ಸರ್ಕಾರವು ಪ್ರತಿ ರಾಜ್ಯದಲ್ಲಿ ನೂತನ ಕ್ರೀಡಾ ನೀತಿಗಳನ್ನು ಆರಂಭಿಸಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಬೆಂಬಲವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ೪ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟದ ಆತಿಥ್ಯ ವಹಿಸಿದ ಆಳ್ವಾಸ್ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿದರು.

ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಒಲಿಂಪಿಕ್ಸ್ ಕ್ರೀಡಾಪಟುಗಳಾದ ಆಸ್ವಿನಿ ಅಕ್ಕುಂಜೆ, ಸತೀಶ್ ರೈ, ಎ. ಆರ್ ಪೂವಮ್ಮ, ಧಾರುಣ್ ಅಯ್ಯಸ್ವಾಮಿ, ಮೋಹನ್ ಕುಮಾರ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಆಳ್ವಾಸ್ ನ ವಿಧ್ಯಾರ್ಥಿಗಳು ಭಾಗವಹಿಸಿದರು. ದೇಶದ ಸುಮಾರು ೪೦೦ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ೪೦೦೦ಕ್ಕೂ ಅಧಿಕ ಅಥ್ಲೀಟ್‌ಗಳು ಹಾಗೂ ೨೦೦೦ ಕ್ರೀಡಾಧಿಕಾರಿಗಳು ಈ ಭಾಗವಹಿಸಿದ್ದರು. ಪಥಸಂಚಲನದ ಬಳಿಕ ಹೀಲಿಯಮ್ ಬಲೂನುಗಳ ಹಾರಾಟ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಎಲ್ಲರ ಮನಸೆಳೆಯಿತು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ಸಚ್ಚಿದಾನಂದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸಿ ಟಿ ರವಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ರಘುಪತಿ ಭಟ್, ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.