ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಎನ್. ವಿಷ್ಣುವರ್ಧನ್; ಸರಕಾರದ ಆದೇಶದಲ್ಲಿ ಬದಲಾವಣೆ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇಮಕ ಆದೇಶದಲ್ಲಿ ಮಾರ್ಪಾಡುಗೊಳಿಸಿರುವ ರಾಜ್ಯ ಸರಕಾರ, ಅಕ್ಷಯ್ ಮಚ್ಚೀಂದ್ರ ಅವರನ್ನು ಕೈಬಿಟ್ಟು ಬೆಂಗಳೂರು ನಗರ ಡಿಸಿಪಿ(ಆಡಳಿತ) ಆಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಬುಧವಾರ  ನಿಯುಕ್ತಿಗೊಳಿಸಿದೆ.
ಡಿ.31ರಂದು ರಾತ್ರಿ ಹೊರಡಿಸಿದ ಆದೇಶದಂತೆ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಮಚ್ಚೀಂದ್ರ ಇಂದು ಬೆಳಗ್ಗೆ ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿದ್ದರು. ಆದರೆ ಆ ಸಂದರ್ಭ ಸರಕಾರ ಆದೇಶವನ್ನು ಮಾರ್ಪಾಡು ಮಾಡಿರುವುದರಿಂದ ಅವರು ಅಧಿಕಾರ ಸ್ವೀಕರಿಸಿರಲಿಲ್ಲ.
ವಿಷ್ಣುವರ್ಧನ್ ಅವರು 2015ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಮೈಸೂರು ಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.