ಬೆಂಗಳೂರು: ಹ್ಯಾಟ್ರಿಕ್ ಹೀರೋ ನಟ ಶಿವರಾಜ್ಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅಪರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಕಾಂತರಾಜ್, ನಟ ಶಿವರಾಜ್ಕುಮಾರ್ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಪಾಸ್ಪೋರ್ಟ್ನಲ್ಲಿರುವಂತೆ ‘ಪುಟ್ಟಸ್ವಾಮಿ ಶಿವರಾಜ್ ಕುಮಾರ್’ ಎಂದು ಮತದಾರರ ಪಟ್ಟಿಯಲ್ಲೂ ಹೆಸರು ದಾಖಲಿಸುವಂತೆ ಶಿವರಾಜ್ಕುಮಾರ್ ಅವರೇ ಸ್ವಯಂಪ್ರೇರಿತವಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಡಿಸಿ ಕಾಂತರಾಜ್ ಅವರು ನಟ ಶಿವರಾಜ್ಕುಮಾರ್ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ, ಹೆಸರು ತಿದ್ದುಪಡಿ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ.
ನಟರ ಮನವಿಯ ಮೇರೆಗೆ ಚುನಾವಣಾಧಿಕಾರಿಗಳು ಫಾರಂ–8ರ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಅಧಿಕೃತವಾಗಿ ತಿದ್ದುಪಡಿ ಮಾಡುವ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.















