ಸೆ.9ರಿಂದ ಉಡುಪಿಯಲ್ಲಿ ‘ವನಸುಮ ಜೇಸಿ ಸಪ್ತಾಹ’; ‘ಕೋವಿ ಮತ್ತು ಕೊಳಲು’ ಟೀಸರ್ ಬಿಡುಗಡೆ

ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆ ಸಹಯೋಗದಲ್ಲಿ ಸೆ.9ರಿಂದ 15ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ‘ವನಸುಮ ಜೇಸಿ ಸಪ್ತಾಹ’ ಹೆಸರಿನ ಒಂದು ವಾರದ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ.

ಪ್ರತಿದಿನ ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಪ್ತಾಹದ ನಿರ್ದೇಶಕ ಬಾಸುಮ ಕೊಡಗು ತಿಳಿಸಿದರು.ಸಪ್ತಾಹದ ಉದ್ಘಾಟನೆಯನ್ನು ಜೇಸಿಐ ಭಾರತದ ಜೇಸಿ ಸಪ್ತಾಹ ನಿರ್ದೇಶಕ ಗೌರೀಶ್ ಭಾರ್ಗವ ನೆರವೇರಿಸಲಿದ್ದು, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬಾಸುಮ ಕೊಡಗು ನಿರ್ದೇಶನದಲ್ಲಿ ಹಾಗೂ ಎಂಪೀರಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಕೋವಿ ಮತ್ತು ಕೊಳಲು’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಚಿತ್ರ ನಿರ್ದೇಶಕ ಜೆ.ಪಿ. ತೂಮಿನಾಡ್ ಟೀಸರ್ ಬಿಡುಗಡೆ ಮಾಡಲಿದ್ದಾರೆ.

ಖ್ಯಾತ ನಟರಾದ ಗೋಪಿನಾಥ್ ಭಟ್, ಪ್ರಕಾಶ್ ತೂಮಿನಾಡ್, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿರ್ಮಾಪಕರ ತಂಡದ ನಿಶಾನ್ ಕೃಷ್ಣ ಭಂಡಾರಿ, ಲೋಹಿತ್ ಶೆಟ್ಟಿ, ಹೇಮಂತ್ ಕುಲಾಲ್, ದೀಪಕ್ ಶೆಟ್ಟಿ, ಸಂಗೀತಾ ಶರತ್, ಚಂದ್ರಶೇಖರ್ ಪೂಜಾರಿ, ಸುಭೋದ್, ಪಿಎಸ್ ಫಿಲಂಸ್‌ನ ಕುಮಾರ್ ಡಿಬಿ ಹಾಗೂ ಚಿತ್ರದ ಕಥೆಗಾರ ಗುರುರಾಜ್ ಮಾರ್ಪಳ್ಳಿ ಉಪಸ್ಥಿತರಿರಲಿದ್ದಾರೆ.

ವೈವಿಧ್ಯಮಯ ಕಾರ್ಯಕ್ರಮಗಳ ಮೆರುಗುಸಾಂಸ್ಕೃತಿಕ ಹಬ್ಬದ ಮೊದಲ ದಿನ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ ನಡೆಯಲಿದೆ. ಸೆ.10ರಂದು ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಪ್ರದರ್ಶನ, ಸೆ.11ರಂದು ಕಾಪು ರಂಗತರಂಗ ತಂಡದಿಂದ ‘ವಿಕ್ರಂ ವೇದ’ ನಾಟಕ ಪ್ರದರ್ಶನ ನಡೆಯಲಿದೆ.

ಸೆ.12ರಂದು ಜೆ.ಪಿ. ತೂಮಿನಾಡ್ ನಿರ್ದೇಶನದ ‘ಕಥೆ ಎಡ್ಡೆಂಡು’ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.13ರಂದು ಸಂಜೆ 4 ಗಂಟೆಯಿಂದ ‘ಅನ್ನೋನ್ಯ ದಂಪತಿ ಸ್ಪರ್ಧೆ’ ಆಯೋಜಿಸಲಾಗಿದೆ.

ಸೆ.14ರಂದು ಸಾವಿತ್ರಿ ನಾಟ್ಯಶಾಲಾ ಕಲಾವಿದರಿಂದ ನೃತ್ಯ ವೈಭವ ನಡೆಯಲಿದ್ದು, ಸೆ.15ರಂದು ಕಾಸರಗೋಡಿನ ಯಕ್ಷಪುತ್ಥಳಿ ಟ್ರಸ್ಟ್ ವತಿಯಿಂದ ‘ಯಕ್ಷಗಾನ ಗೊಂಬೆಯಾಟ’ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಾಸುಮ ಕೊಡಗು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ವನಸುಮ ವೇದಿಕೆ ಉಪಾಧ್ಯಕ್ಷ ಭಾಸ್ಕರ್ ಯು.ಕೆ., ಕಾವ್ಯವಾಣಿ ಕೊಡಗು ಹಾಗೂ ರಾಘವೇಂದ್ರ ಕರ್ವಾಲೊ ಉಪಸ್ಥಿತರಿದ್ದರು.