ಮಲ್ಪೆ ಕಡಲತೀರದಲ್ಲಿ ಬಲೆಗೆ ಸಿಲುಕಿದ್ದ ಆಮೆ ರಕ್ಷಣೆ

ಉಡುಪಿ: ಮಲ್ಪೆ ಕಡಲತೀರದಲ್ಲಿ ಮೀನುಗಾರಿಕಾ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪರೂಪದ ಸಮುದ್ರ ಆಮೆಯನ್ನು ಸ್ಥಳೀಯ ಮೀನುಗಾರರೊಬ್ಬರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಮಲ್ಪೆಯ ಹನುಮಾನ್ ವಿಠೋಭ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಬಲೆಗೆ ಸಿಕ್ಕಿಕೊಂಡಿದ್ದ ಆಮೆಯನ್ನು ಕನ್ನಿ ಮೀನುಗಾರ ಸಂಘದ ಸಕ್ರಿಯ ಸದಸ್ಯ ಹಾಗೂ ಸ್ಥಳೀಯ ನಿವಾಸಿ ಜ್ಞಾನೇಶ್ವರ್ ಕೋಟ್ಯಾನ್ ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಆಮೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದು, ಅದರ ದೇಹಕ್ಕೆ ಸುತ್ತಿಕೊಂಡಿದ್ದ ಮೀನುಗಾರಿಕಾ ಬಲೆಗಳನ್ನು ಜಾಗರೂಕತೆಯಿಂದ ಕತ್ತರಿಸಿ ತೆರವುಗೊಳಿಸಿದರು.

ಬಳಿಕ ಆಮೆಗೆ ಯಾವುದೇ ಹಾನಿಯಾಗದಂತೆ ಮತ್ತೆ ಸಮುದ್ರಕ್ಕೆ ಬಿಟ್ಟರು. ಅವರ ಸಮಯಪ್ರಜ್ಞೆ ಮತ್ತು ಪರಿಸರ ಕಾಳಜಿಯಿಂದ ಅಪರೂಪದ ಸಮುದ್ರ ಜೀವಿಯೊಂದು ಹೊಸ ಜೀವ ಪಡೆದಿದೆ.

ಜ್ಞಾನೇಶ್ವರ್ ಕೋಟ್ಯಾನ್ ಅವರ ಈ ಪರಿಸರ ಸ್ನೇಹಿ ಹಾಗೂ ಮಾನವೀಯ ಕಾರ್ಯವನ್ನು ಕನ್ನಿ ಮೀನುಗಾರ ಸಂಘ ಹಾಗೂ ಮಲ್ಪೆಯ ಸಾರ್ವಜನಿಕರು ಶ್ಲಾಘಿಸಿದ್ದು, ಸಮುದ್ರ ಜೀವಿಗಳ ಸಂರಕ್ಷಣೆಯಲ್ಲಿ ಇಂತಹ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಅಭಿನಂದಿಸಿದ್ದಾರೆ.