ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ ಸಿನಿಮಾ ಇದೀಗ ವಿವಾದದ ಕಾರಣದಿಂದ ಸುದ್ದಿಯಲ್ಲಿದೆ. ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಹೊಸತನದ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಗೂ ಮುನ್ನವೇ ಸಿನಿಮಾ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಚಿತ್ರದಲ್ಲಿ ನಟಿಸಿರುವ Prajwal Devaraj ಅವರಿಗೆ ಒಟ್ಟು ₹1.25 ಕೋಟಿ ಸಂಭಾವನೆ ನಿಗದಿಯಾಗಿದ್ದು, ಅದರಲ್ಲಿ ಇನ್ನೂ ₹25 ಲಕ್ಷ ಬಾಕಿಯಿದೆ ಎನ್ನಲಾಗಿದೆ. ಇದೇ ಕಾರಣದಿಂದ ಅವರು ಚಿತ್ರದ ಡಬ್ಬಿಂಗ್ಗೆ ಹಾಜರಾಗಿಲ್ಲವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇದೇ ವೇಳೆ, ಪ್ರಜ್ವಲ್ ದೇವರಾಜ್ ಹಾಗೂ ಚಿತ್ರದ ನಿರ್ದೇಶಕ ಗುರುದತ್ತ್ ಗಾಣಿಗ Gurudath Ganiga ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆಯೇ ಎಂಬ ಚರ್ಚೆಯೂ ಸಿನಿ ವಲಯದಲ್ಲಿ ಜೋರಾಗಿದೆ. ಕಳೆದ ಎರಡು ತಿಂಗಳಿಂದ ಪ್ರಜ್ವಲ್ ಅವರು ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಆದರೆ, ಸಿನಿಮಾ ಬಿಡುಗಡೆ ತಡವಾಗಲು ಪ್ರಜ್ವಲ್ ದೇವರಾಜ್ ಕಾರಣರಲ್ಲ ಎಂದು ನಿರ್ದೇಶಕ ಗುರುದತ್ ಗಾಣಿಗ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ Raj B. Shetty ಪ್ರತಿಕ್ರಿಯಿಸಿ, “ನನ್ನ ಪಾತ್ರದ ಬಗ್ಗೆ ಪ್ರಜ್ವಲ್ ಅವರಿಗೆ ಮೊದಲೇ ತಿಳಿದಿತ್ತು. ನನ್ನ ಕಟೌಟ್ ಹಾಕಬೇಕು ಎಂದು ನಾನು ಎಂದಿಗೂ ಕೇಳಿಲ್ಲ. ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ ಮಾತ್ರ. ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರದ ಮೂಲಕ ಇನ್ನಷ್ಟು ಹೆಸರು ಬಂದರೆ ನನಗೆ ಸಂತೋಷವೇ,” ಎಂದು ಹೇಳಿದ್ದಾರೆ.















