ಕಾರ್ಕಳ ಕ್ರೈಸ್ಟಿಂಗ್: ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವನಮಹೋತ್ಸವ

ಕಾರ್ಕಳ: ಇಲ್ಲಿನ ಕ್ರೈಸ್ಟಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಆವರಣದಲ್ಲಿ ಸೇವಾ ಯೋಜನೆಯ ಸದಸ್ಯರು ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಾಣಿಜ್ಯ ಶಾಕ್ತ ಉಪನ್ಯಾಸಕ ದೀಪಕ್ ಅವರು “ಪ್ರಕೃತಿಯೇ ನಮ್ಮ ಜೀವನ, ಪ್ರಕೃತಿಯ ವಿನಾಶ ಎಂದರೆ ಅದು ನಮ್ಮದೇ ವಿನಾಶ. ವಿದ್ಯಾರ್ಥಿಗಳು ಪ್ರಕೃತಿಯ ಬಗ್ಗೆ ಪ್ರೀತಿ ಕಾಳಜಿ ಬೆಳೆಸಿಕೊಂಡು ಪರಿಸರವನ್ನು ಕಾಪಾಡಬೇಕು, ಪ್ರತಿಯೊಬ್ಬರೂ ಪ್ರತೀ ವರ್ಷ ಕನಿಷ್ಟ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು. ಆ ಮೂಲಕ ಈ ಭೂಮಿಯ ಹಸಿರೀಕರಣ ಮಾಡಬೇಕು” ಎಂದು ಹೇಳಿದರು. ಸಂಸ್ಥೆಯ ಸಂಸ್ಕೃತ ಉಪನ್ಯಾಸಕ ಕಿರಣ್ ಪೂಜಾರಿ, ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀಮತಿ ಶಿಜಿ.ಸಿ.ಕೆ, ಅಲೆನ್ ರೋಷನ್ ಡಿಮೆಲ್ಲೊ, ಸಂಖ್ಯಾಶಾಸ್ತ್ರ ಉಪನ್ಯಾಸಕಿ ಕು. ಮಧುಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸದಸ್ಯರು ಹಾಗೂ ಕ್ರೈಸ್ಟಿಂಗ್ ಎಜುಕೇಷನ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.