ಮಣಿಪಾಲ್, ಮೇ 22: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ವಿಶ್ವವಿದ್ಯಾಲಯ ಎಂದು
ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ತನ್ನ ಪ್ರಕಾಶನ ವಿಭಾಗವಾದ ಮಣಿಪಾಲ್ ಯುನಿವರ್ಸಲ್ ಪ್ರೆಸ್ನ
317ನೇ ಪ್ರಕಟಣೆ, ಮಾಹೆ ಮಣಿಪಾಲದ ಆರೋಗ್ಯ ಮತ್ತು ದಂತ ವಿಜ್ಞಾನ ವಿಭಾಗದ ನಿಕಟಪೂರ್ವ ಸಹ ಕುಲಪತಿ
ಡಾ. ಪಿ.ಎಲ್.ಎನ್.ಜಿ. ರಾವ್ ಅವರು ರಚಿಸಿರುವ ‘ಅಟ್ಲಾಸ್ ಆಫ್ ಡೆವಲಪ್ಮೆಂಟ್ ಅನಾಮಲೀಸ್ ಇನ್ ದಿ
ನ್ಯೂಬಾರ್ನ್ಸ್’ ಕೃತಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು, “ವೈದ್ಯಕೀಯ ಸಾಹಿತ್ಯ
ಲೋಕಕ್ಕೆ ಈ ಪುಸ್ತಕವು ಅಪೂರ್ವ ಹಾಗೂ ಗಮನಾರ್ಹ ಕೊಡುಗೆಯಾಗಿದೆ. ದಶಕಗಳ ಕಾಲ ನಡೆಸಿದ ನಿರಂತರ
ವೈದ್ಯಕೀಯ ವೀಕ್ಷಣೆ ಮತ್ತು ಸೂಕ್ಷ್ಮ ದಾಖಲೀಕರಣದ ಶ್ರಮ ಇದರಲ್ಲಿದೆ. ವೈದ್ಯಕೀಯ ವಿದ್ಯಾರ್ಥಿಗಳು,
ಇಂಟರ್ನ್ಗಳು, ಕನ್ಸಲ್ಟೆಂಟ್ಗಳು ಹಾಗೂ ತಜ್ಞರು ಸೇರಿದಂತೆ ಆರೋಗ್ಯ ಕ್ಷೇತ್ರದ ಎಲ್ಲ ವೃತ್ತಿಪರರಿಗೂ ಅತ್ಯಂತ
ಉಪಯುಕ್ತ ಕೈಪಿಡಿಯಾಗಲಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ,
“ವೈದ್ಯಕೀಯ ಶಿಕ್ಷಣದಲ್ಲಿ ಚಿತ್ರಾತ್ಮಕ ಪ್ರಾತಿನಿಧ್ಯ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದಶಕಗಳ ಕಾಲ ಇಂತಹ
ಅಪರೂಪದ ವೈದ್ಯಕೀಯ ಚಿತ್ರಗಳನ್ನು ಸಂರಕ್ಷಿಸಿ, ಕ್ರೋಡೀಕರಿಸಲು ಅಪಾರ ಶ್ರಮ ಬೇಕಾಗುತ್ತದೆ. ಈ ಕೃತಿಯು
ಕೇವಲ ಸಾಂಪ್ರದಾಯಿಕ ಪಠ್ಯಪುಸ್ತಕವಾಗಿರದೆ, ಚಿತ್ರಗಳ ಮೂಲಕ ಅತ್ಯಂತ ಸಂಕೀರ್ಣವಾದ ವೈದ್ಯಕೀಯ
ಸಮಸ್ಯೆಗಳನ್ನು ಸರಳಗೊಳಿಸುತ್ತದೆ. ಇದರಲ್ಲಿರುವ ಉನ್ನತ ಗುಣಮಟ್ಟದ ಛಾಯಾಚಿತ್ರಗಳು, ಸ್ಕ್ಯಾನ್ ವರದಿಗಳು,
ರೋಗದ ಮುನ್ಸೂಚನೆ ಹಾಗೂ ಪೋಷಕರಿಗೆ ನೀಡಬೇಕಾದ ಆಪ್ತಸಮಾಲೋಚನೆಯ ಮಾರ್ಗಸೂಚಿಗಳು ವೈದ್ಯರು
ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿವೆ” ಎಂದು ಶ್ಲಾಘಿಸಿದರು.
‘ಮಣಿಪಾಲ್ ಯುನಿವರ್ಸಲ್ ಪ್ರೆಸ್’ ಪ್ರಕಟಿಸಿರುವ ಈ ಸಮಗ್ರ ವರ್ಣರಂಜಿತ ಅಟ್ಲಾಸ್, ನವಜಾತ ಶಿಶುಗಳಲ್ಲಿ
ಕಂಡುಬರುವ ದೈಹಿಕ ಮತ್ತು ಬೆಳವಣಿಗೆಯ ವೈಪರೀತ್ಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ
ನೀಡಲು ಅಗತ್ಯವಿರುವ ವಿವರಗಳನ್ನು ಇದರಲ್ಲಿ ದಾಖಲಿಸಿದೆ. ಇದು ದಾದಿಯರು, ಇಂಟರ್ನ್ಗಳು, ಮಕ್ಕಳ ತಜ್ಞರು,
ರೇಡಿಯಾಲಜಿಸ್ಟ್ಸ್, ಪ್ರಸೂತಿ ತಜ್ಞರು ಹಾಗೂ ಸೂಪರ್ ಸ್ಪೆಷಲಿಸ್ಟ್ಗಳಿಗೆ ಪ್ರಾಯೋಗಿಕ ಆಕರ ಗ್ರಂಥವಾಗಿ
ಉಪಯುಕ್ತವಾಗಿದೆ.
ಲೇಖಕ ಡಾ. ಪಿ.ಎಲ್.ಎನ್.ಜಿ. ರಾವ್ ಅವರು ಮಾತನಾಡಿ, “ಈ ಅಟ್ಲಾಸ್ ಅನ್ನು ಸುಮಾರು ಎರಡು ವರ್ಷಗಳಲ್ಲಿ
ಸಿದ್ಧಪಡಿಸಲಾಗಿದ್ದು, ವೈದ್ಯಕೀಯ ವೃತ್ತಿಜೀವನದಲ್ಲಿ ಎದುರಾಗುವ ಸುಮಾರು 85 ರೀತಿಯ ಬೆಳವಣಿಗೆಯ
ವೈಪರೀತ್ಯಗಳ ಸ್ಥಿತಿಗತಿಗಳನ್ನು ಇದು ಒಳಗೊಂಡಿದೆ. ನವಜಾತ ಶಿಶುಗಳಲ್ಲಿನ ನ್ಯೂನತೆಗಳನ್ನು ಆರಂಭಿಕ
ಹಂತದಲ್ಲೇ ಪತ್ತೆಹಚ್ಚಲು, ನಿಖರವಾದ ರೋಗನಿರ್ಣಯ ಮಾಡಲು, ಪೋಷಕರಿಗೆ ಧೈರ್ಯ ತುಂಬಿ
ಆಪ್ತಸಮಾಲೋಚನೆ ನಡೆಸಲು ಮತ್ತು ವೈದ್ಯರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದು ಈ
ಕೃತಿಯ ಮುಖ್ಯ ಉದ್ದೇಶವಾಗಿದೆ. ವರ್ಷಗಳಿಂದ ಸಂಗ್ರಹಿಸಿದ್ದ ಸಾವಿರಾರು ವೈದ್ಯಕೀಯ ಚಿತ್ರಗಳನ್ನು
ಛಾಯಾಗ್ರಹಣ, ಸ್ಕ್ಯಾನಿಂಗ್, ಎಡಿಟಿಂಗ್ ಹಾಗೂ ಸಂರಕ್ಷಣೆ ಮಾಡುವ ಪ್ರಕ್ರಿಯೆ ನಿಜಕ್ಕೂ ಅತ್ಯಂತ
ಸವಾಲಿನದ್ದಾಗಿತ್ತು,” ಎಂದು ಕೃತಿ ರಚನೆಯ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಸಿಒಒ ಡಾ. ಆನಂದ್ ವೇಣುಗೋಪಾಲ್, “ಮಕ್ಕಳಲ್ಲಿ ಹುಟ್ಟಿನಿಂದ
ಬರುವ ನ್ಯೂನತೆಗಳ ಕುರಿತಾದ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಈ ಕೃತಿಯ ಕೊಡುಗೆ ಶ್ಲಾಘನೀಯ.
ಗರ್ಭಾವಸ್ಥೆಯಲ್ಲೇ ರೋಗನಿರ್ಣಯ ಮಾಡುವ ಆಧುನಿಕ ಪದ್ಧತಿಗಳು ಹಾಗೂ ಸೂಕ್ತ ವೈದ್ಯಕೀಯ ಹಸ್ತಕ್ಷೇಪಗಳು
ನವಜಾತ ಶಿಶುಗಳ ಆರೋಗ್ಯದ ಫಲಿತಾಂಶವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ,” ಎಂದು
ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಣಿಪಾಲ್ ಯುನಿವರ್ಸಲ್ ಪ್ರೆಸ್ನ ಮುಖ್ಯಸ್ಥ ಡಾ.
ಶ್ರೀನಿವಾಸ ಆಚಾರ್ಯ, “ದೀರ್ಘಕಾಲೀನ ಪ್ರಸ್ತುತತೆ ಹೊಂದಿರುವ ಆಯ್ದ ಪುಸ್ತಕಗಳನ್ನು ಶೈಕ್ಷಣಿಕ
ಹಿತದೃಷ್ಟಿಯಿಂದ, ವಾಣಿಜ್ಯ ಲಾಭವಿಲ್ಲದೆ ಪ್ರಕಟಿಸಲು ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆʼ ಎಂದರು.
ಸಮಾರಂಭದಲ್ಲಿ ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ, ಎಂಎಸ್ಸಿಇ ವಿಭಾಗದ ಮುಖ್ಯಸ್ಥ ಡಾ. ಸಂದೀಪ್
ಎಸ್. ಶೆಣೈ, ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ಎಚ್. ಭರತ್ ಕುಮಾರ್,
ಅರವಿಂದ್ ಎನ್. ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು ಹಾಗೂ ಪ್ರಕಾಶನ ಸಂಸ್ಥೆಯ ಸಿಬ್ಬಂದಿ
ಭಾಗವಹಿಸಿದ್ದರು.

















