ಮಣಿಪಾಲ: ಕಲ್ಲು ಎತ್ತು ಹಾಕಿ ಯುವತಿಯ ಕೊಲೆಗೆ ಯತ್ನಿಸಿ ಸುಲಿಗೆ ಪ್ರಕರಣ: ಸ್ನೇಹಿತೆಯ ಬಂಧನ

ಉಡುಪಿ: ಮಣಿಪಾಲದ ಶಾಂತಿನಗರದ ಬಳಿಯ ರೂಮಿನಲ್ಲಿ ಅಂಕೋಲದ ಯೋಗೀತಾ (23) ಎಂಬಾಕೆಯ ಕೊಲೆಗೆ ಯತ್ನಿಸಿ ಚಿನ್ನಾಭರಣ ಕಳವು ಮಾಡಿರುವ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಯೋಗೀತಾಳ ಪಕ್ಕದ ರೂಮಿನಲ್ಲಿಯೇ ವಾಸವಾಗಿದ್ದ ಸ್ನೇಹಿತೆಯನ್ನೇ ಬಂಧಿಸಿದ್ದಾರೆ.
ಅಂಕೋಲಾ ತಾಲೂಕಿನ ಖೇಣಿ ಬಾವಿಕೇರಿ ಗ್ರಾಮದ ಸುಷ್ಮಾ ಅಣ್ಣಪ್ಪ ನಾಯ್ಕ(31) ಬಂಧಿತ ಆರೋಪಿ. ಯೋಗೀತಾ ತನ್ನ ಇಬ್ಬರು ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಬ್ಬರು ಮೇ 12ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದರು. ಇವರು ಕೆಲಸ ಮುಗಿಸಿ ಬುಧವಾರ ಬೆಳಗ್ಗೆ ರೂಮಿಗೆ ಬಂದು ನೋಡಿದಾಗ ಯೋಗೀತಾ ಗಂಭೀರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಯೋಗೀತಾಳನ್ನು ಅಪರಿಚಿತರು ಬಂಗಾರದ ಸರವನ್ನು ಅಪಹರಿಸಿ, ಬಳಿಕ ಆಕೆಯ ತಲೆಗೆ ಸಿಂಮೆಂಟ್ ಕಲ್ಲಿನಿಂದ ಹೊಡೆದು ಕೊಲೆಯತ್ನಿಸಿರುುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಸ್ಥಳದ ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ಮತ್ತು ಸುತ್ತಲಿನ ಸಂಶಯಿತ ವ್ಯಕ್ತಿಗಳನ್ನು ವಿಚಾರಿಸಲಾಯಿತು. ಕೊನೆಗೆ ಪೊಲೀಸರು ಸಂಶಯಗೊಂಡು ಯೋಗೀತಾಳ ರೂಮಿನ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಯೋಗೀತಾಳ ಸ್ನೇಹಿತೆ ಸುಷ್ಮಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆಯಲ್ಲಿ ಆರೋಪಿತೆ ಈ ಕೃತ್ಯ ಎಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಹಣಕ್ಕಾಗಿ ಕೊಲೆಯತ್ನ ಕೃತ್ಯ: ಆರೋಪಿ ಸುಷ್ಮಾಗೆ ತೀರಾ ಹಣಕಾಸಿನ ತೊಂದರೆ ಇದ್ದು ಹಾಗೂ ಆಕೆಯ ಮನೆಯವರು ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದರು. ಆಕೆ ದುಡಿದ ಹಣವು ಆಕೆಯ ಖರ್ಚಿಗೆ ಸರಿ ಹೋಗುತ್ತಿರುವುದ ರಿಂದ ಕಳೆದ ಕಳೆದ 3 ವರ್ಷಗಳಿಂದ ಮನೆಗೆ ಹಣ ಕಳುಹಿಸಕೊಡಲು ಸಾಧ್ಯವಾಗಿಲ. ಅದಕ್ಕಾಗಿ ಆಕೆಯ ಮನೆಯವರು ಕೆಲಸ ಬಿಟ್ಟು ವಾಪಾಸ್ಸು ಊರಿಗೆ ಬರುವಂತೆ ಪೀಡಿಸುತ್ತಿದ್ದರು.
ಅದಕ್ಕೆ ಮನೆಗೆ ಕಳುಹಿಸಲು ಹಣವನ್ನು ಹೊಂದಿಸುವ ಅನಿವಾರ್ಯತೆ ಯಿಂದ ಸುಷ್ಮಾ ತನ್ನ ಗೆಳತಿ ಯೋಗಿತಾಳ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಅಪಹರಿಸಲು ನಿರ್ಧರಿಸಿದ್ದಳು. ಅದಕ್ಕಾಗಿ ಆಕೆ ಮೇ 12ರಂದು ರಾತ್ರಿ 9:30ರ ಸುಮಾರಿಗೆ ಯೋಗೀತಾಳ ರೂಮಿನಲ್ಲಿ ಆಕೆಯ ಜೊತೆ ಮಲಗಿದ್ದಳು.
ಮೇ 13ರಂದು ಬೆಳಗಿನ ಜಾವ 4:30ರ ಸುಮಾರಿಗೆ ಯೋಗಿತಾ ಮಲಗಿದ್ದ ವೇಳೆ ಸುಷ್ಮಾ ಅದಾಗಲೇ ರೂಮಿನ ಒಳಗೆ ತಂದಿರಿಸಿಕೊಂಡಿದ್ದ ಕಾಂಕ್ರಿಟ್ ಹೋಲೋ ಬ್ಲಾಕ್ ಕಲ್ಲಿನಿಂದ ಯೋಗೀತಾಳ ತಲೆಗೆ ಹಲ್ಲೆ ನಡೆಸಿದಳು. ನಂತರ ಯೋಗೀತಾಳ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಯನ್ನು ಅಪಹರಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ತನ್ನ ರೂಮಿಗೆ ಹೋಗಿದ್ದಳು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಆಸ್ಪತ್ರೆಗೆ ಸೇರಿಸಿದ್ದಳು: ನಂತರ ಯೋಗಿತಾಳ ರೂಮ್ ಮೇಟ್‌ಗಳಾದ ಮೇಘಾ ಗೌಡ, ಗಗನಾ, ನಾಗರತ್ನ ರಾತ್ರಿ ಪಾಳಿ ಕರ್ತವ್ಯ ಮುಗಿಸಿ ರೂಮಿಗೆ ಬಂದು ಯೋಗಿತಾಳನ್ನು ನೋಡಿ ಬೊಬ್ಬೆ ಹಾಕಿದ್ದು, ಆಗ ಸುಷ್ಮಾ ಕೂಡ ತನ್ನ ರೂಮಿನಿಂದ ಹೊರಗೆ ಬಂದು ಬಳಿಕ ಅವರೊಂದಿಗೆ ಯೋಗಿತಾಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ನೆರವಾದಳು ಎಂದು ತಿಳಿದುಬಂದಿದೆ.
ಅದರಂತೆ ಪೊಲೀಸರು ಮೇ 13ರಂದು ಸುಷ್ಮಾಳನ್ನು ಬಂಧಿಸಿ ಪ್ರಕರಣದಲ್ಲಿ ಅಪಹರಿಸಿದ ಚಿನ್ನದ ಸರ ಹಾಗೂ ಬೆಂಡೋಲೆಯನ್ನು ವಶಪಡಿಸಿಕೊಂಡರು. ಈ ಪ್ರಕರಣದ ತನಿಖಾ ತಂಡದಲ್ಲಿ ಮಣಿಪಾಲ ಪೊಲೀಸ್ ಉಪನಿರೀಕ್ಷಕ ರಾದ ತಿಮ್ಮೇಶ್ ಬಿ.ಎನ್., ಶಂಭುಲಿಂಗಯ್ಯ ಹಾಗೂ ಠಾಣಾ ಸಿಬ್ಬಂದಿ ಎಎಸ್ಸೈ ವಿವೇಕ್, ಚೇತನ್, ಅಜ್ಮಲ್, ರವಿರಾಜ್, ಮಂಜುನಾಥ್, ಉಡುಪಿ ನಗರ ಠಾಣೆಯ ಸಿಬ್ಬಂದಿ ಜೀವನ್, ಪ್ರಸನ್ನ, ಮಲ್ಲಯ್ಯ, ಹೇಮಂತ್ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳಾದ ರಕ್ಷಣ್ ಕಾಮತ್, ರಶ್ಮಿ ಇದ್ದು ತನಿಖೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಸುಚಿತ್ರಾ ಹಾಗೂ ವಿನಾಯಕ ಬಾಳಗದ್ದೆ ನೆರವಾಗಿದ್ದರು.