ಕುಂದಾಪುರ: ತಾಲ್ಲೂಕಿನ ಶಂಕರನಾರಾಯಣದ ಗ್ರಾಮೀಣ ಪ್ರದೇಶದಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮದರ್ ತೆರೆಸಾ ಶಿಕ್ಷಣ ಸಂಸ್ಥೆಗೆ 2026ರ “ಇಂಡಿಯನ್ ಎಜುಕೇಷನ್ ಅವಾರ್ಡ್ಸ”ನಲ್ಲಿ “ಗ್ರಾಮೀಣ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಶ್ರೇಷ್ಠ ಶಾಲೆ ಮತ್ತು ಪಿಯು ಕಾಲೇಜು” ಎಂಬ ಗೌರವ ಪ್ರಶಸ್ತಿ ಲಭಿಸಿದೆ.
ಉಡುಪಿ ಜಿಲ್ಲಾ ಮಟ್ಟದಲ್ಲಿ ಈ ಗೌರವವನ್ನು ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಗಿದೆ. Anyelp Groups ವತಿಯಿಂದ ಆಯೋಜಿಸಲಾದ ಈ ಭವ್ಯ ಸಮಾರಂಭವು ಏಪ್ರಿಲ್ 08 ರಂದು ಬೆಂಗಳೂರು ನಗರದ ಆರ್ಜಿ ರಾಯಲ್ ಹೋಟೆಲ್ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಖ್ಯಾತರಾದ ಮಾಸ್ಟರ್ ಶೆಫ್ ಸಂಜೀವ್ ಕಪೂರ್, ಹಾಗೂ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಹಾಗೆಯೇ ಮಾಜಿ ಸಾಲಿಸಿಟರ್ ಜನರಲ್ ಸಂತೋಷ್ ಹೆಗ್ಡೆ ಯವರೂ ಪ್ರಮುಖ ಆಹ್ವಾನಿತರಾಗಿದ್ದರು. ಅಂದು ನೆರೆದಿದ್ದ ಗಣ್ಯರ ಸಮ್ಮುಖದಲ್ಲಿ ಶ್ರೀ ಡಾ. ಶಿವಶಂಕರ್ ಸ್ವಾಮೀಜಿಯವರಿಂದ ಸಂಸ್ಥೆಯ ಸಂಸ್ಥಾಪಕರಾದ ಕು. ಶಮಿತಾ ರಾವ್ ಹಾಗೂ ಕು. ರೆನಿಟಾ ಲೋಬೋ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
Pre KG ಇಂದ PUC ತನಕ ಶಿಕ್ಷಣವನ್ನು ಒದಗಿಸುತ್ತಿರುವ ಈ ಸಂಸ್ಥೆ, ಕಳೆದ 28 ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ತನ್ನನ್ನು ಅರ್ಪಿಸಿಕೊಂಡಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಹಲವಾರು ಶೈಕ್ಷಣಿಕ ಸಾಧನೆಗಳನ್ನು ಮಾಡುತ್ತಿರುವ ಈ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿಯ ಪಥದಲ್ಲಿ ಸಾಗುತ್ತಿದೆ.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ, ಶಿಸ್ತು ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಾ ಗ್ರಾಮೀಣ ಭಾಗದ ಪೋಷಕರಲ್ಲಿ ವಿಶ್ವಾಸವನ್ನು ಗಳಿಸಿರುವ ಸಂಸ್ಥೆ ಇದಾಗಿದ್ದು, ಇಂತಹ ನಿರಂತರ ಸಾಧನೆಗಳ ಪಥದಲ್ಲಿ ಲಭಿಸಿದ ಈ ಪ್ರಶಸ್ತಿ ಸಂಸ್ಥೆಯ ಯಶಸ್ಸಿನ ಪ್ರಯಾಣದ ಮತ್ತೊಂದು ಸ್ಮರಣೀಯ ಮೈಲುಗಲ್ಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಸ್ಥಾಪಕದ್ವಯರು, ತಮ್ಮ ಸಾಧನೆಗೆ ತಮ್ಮ ತಾಯಂದಿರೇ ಪ್ರೇರಣೆ ಎಂದು ತಿಳಿಸಿ, ತಮ್ಮ ತಾಯಂದಿರಲ್ಲಿದ್ದ ಛಲ ಹಾಗೂ ಪರಿಶ್ರಮವೇ ತಮ್ಮಲ್ಲೂ ಪ್ರತಿಬಿಂಬಿತವಾಗಿದೆ ಎಂದು ಹೇಳಿದರು ಹಾಗೂ ಈ ಗೌರವವನ್ನು ಸಂಸ್ಥೆಯ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರಿಗೆ ಸಮರ್ಪಿಸಿದರು.
ಗ್ರಾಮೀಣ ಹಿನ್ನೆಲೆಯಲ್ಲಿಯೇ ಇದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನ ವಿಶೇಷ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿಕೊಂಡಿದೆ.

















