ಮಂಗಳೂರು: ಮುಂಬರುವ ರಾಜ್ಯ ಉಪ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್ ಬಹುಮತ ಗಳಿಸುತ್ತದೆ ಎಂದು ಮಾಜಿ ಸಚಿವ ಯುಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಅಂತಹವರು ಜನರಿಗೆ ಬೇಕಾ ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ಹಣ ಪಡೆದ ಅನರ್ಹರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಇನ್ನು ನಾವೆಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮ ಪಡುತ್ತೇವೆ ಎಂದರು.
ಶಾಸಕ ತನ್ವೀರ್ ಸೇಠ್ಗೆ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಜನಪ್ರತಿನಿಧಿಗೆ ಹಲ್ಲೆ ಮಾಡುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕೃತ್ಯದ ಸಂಪೂರ್ಣ ತನಿಖೆ ಮಾಡಲೇಬೇಕು ಎಂದ ಯುಟಿ ಖಾದರ್, ಇದರ ಹಿಂದೆ ಯಾರು ಇದ್ದಾರೆ ಎಂಬುವುದು ಜನರಿಗೆ ಗೊತ್ತಾಗಬೇಕು. ಜಾತ್ಯತೀತ ನಾಯಕನ ಮೇಲೆ ಹಲ್ಲೆ ಮಾಡಿ ಕೋಮು ವಿಭಜನೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸಿಎಂ ಮತ್ತೆ ರಾಜಕೀಯ ತಾರದೇ ನಿರ್ಧಾರ ಕೈಗೊಳ್ಳಬೇಕು ಎಂದರು.












