ಉಡುಪಿ: ಯುವಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ವಿಶೇಷ ಯೋಚನೆ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ಮುನಿಯಾಲಿನಲ್ಲಿ ಸಂಜೀವಿನಿ ಗೋಧಾಮವನ್ನು ಕೃಷಿ ಸಂಶೋಧನಾ ಕೇಂದ್ರದಂತೆ ನಿರ್ಮಿಸಿದ್ದಾರೆ. ಆ ಮೂಲಕ ಕೈಗಾರಿಕೋಧ್ಯಮಿಯೊಬ್ಬರು ಕೃಷಿಗೆ ಆದ್ಯತೆ ನೀಡುತ್ತಿರುವುದು ಮಹಾನ್ ಕಾರ್ಯ. ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಗುರುವಾರ ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದರು.
ರೈತರು, ಕೃಷಿ ಮತ್ತು ಯುವಸಮುದಾಯವನ್ನು ಕೃಷಿಯತ್ತ ಮರಳಿ ತಂದು ಬದುಕು ಕಟ್ಟಲು ಪ್ರೇರಣೆ ನೀಡುವ ಮಹಾಸಂಕಲ್ಪದಿಂದ ನಡೆಯುವ ಪಾರಂಪರಿಕ ಶ್ರೀಮನ್ನಾಗಮಂಡಲವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಎಂದು ಉದಯ ಕುಮಾರ್ ಶೆಟ್ಟಿ ಹೇಳಿದರು.
ಮುನಿಯಾಲು ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ಸವಿತಾ ರಾಮಕೃಷ್ಣ ಆಚಾರ್, ನಮಿತಾ ಉದಯ ಕುಮಾರ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್, ಪಡುಕುಡೂರು ಪ್ರಸನ್ನ ಶೆಟ್ಟಿ, ಭಾರವಿ ಶೆಟ್ಟಿ, ಕಡ್ತಲ ಸುನೀಲ್ ಹೆಗ್ಡೆ, ಕುಕ್ಕುಜೆ ಸಂಪತ್ ಪೂಜಾರಿ, ಎಳ್ಳಾರೆ ನಾರಾಯಣ ಆಚಾರ್ ಸಹಿತ ವಿವಿಧ ಪ್ರಮುಖರು ಉಪಸ್ಥಿತರಿದ್ದರು.
















