ಮಸ್ಕತ್: ಫೋರ್ & ಸಿಕ್ಸ್ ಕ್ರಿಕೆಟರ್ಸ್ ಮಸ್ಕತ್ ಸಂಘದ ವತಿಯಿಂದ ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೌತಮ್ ಕುಂದಾಪುರ ಅವರನ್ನು ಗೌರವಿಸುವ ಸನ್ಮಾನ ಸಮಾರಂಭವು ವಾದಿಕಬೀರ ನ ಹೋಟೆಲ್ ಗೋಲ್ಡನ್ ಓಯಾಸಿಸ್ನಲ್ಲಿ ಶನಿವಾರ ರಾತ್ರಿ 8 ಗಂಟೆಗೆ ನೆರವೇರಿತು.
ಭಾರತೀಯ ನೌಕಾದಳದಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೌತಮ್ ಕುಂದಾಪುರ ಅವರು ನೌಕಾ ನಿರ್ಮಾಣ, ಯೋಜನಾ ನಿರ್ವಹಣೆ ಹಾಗೂ ನಾಯಕತ್ವ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿರುವುದಕ್ಕಾಗಿ ಸಮುದಾಯದ ಪರವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ಸದಸ್ಯರು ಆತ್ಮೀಯವಾಗಿ ಆಯೋಜಿಸಿದ್ದು, ದಯಾನಂದ ರಾವ್ ಅವರು ಹೂಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಸಂಘದ ಹಿರಿಯ ಸದಸ್ಯರಾದ ಸುರೇಂದ್ರ ಶೆಟ್ಟಿ, ಜಯರಾಜ ಶೆಟ್ಟಿ, ಉತ್ತಮ ರೈ ಹಾಗೂ ರವಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುನಂದನ ಅವರಿಂದ ದೇಶಭಕ್ತಿ ಗೀತೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಹರೀಶ್ ಹೊಸಂಗಡಿ ಅವರು ಗೌತಮ್ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನೀಡಿದರು.
ನಂತರ ಗಣ್ಯರು ಸೇರಿ ಗೌತಮ್ ಕುಂದಾಪುರ ಅವರನ್ನು ಸನ್ಮಾನಿಸಿದರು. ತಮ್ಮ ಭಾಷಣದಲ್ಲಿ ಅವರು ಯುವಕರಿಗೆ ದೇಶಭಕ್ತಿ, ಶಿಸ್ತು ಮತ್ತು ಸೇವಾ ಮನೋಭಾವದ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಫೋರ್ & ಸಿಕ್ಸ್ ಕ್ರಿಕೆಟರ್ಸ್ ಮಸ್ಕಟ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಜೆಪಿ ಗಿಳಿಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
















