ಉಡುಪಿ: ಶ್ರೀ ಶೀರೂರು ಮಠದ ಶ್ರೀ ಶ್ರೀವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪೂರ್ಣವಾಗಿ ಸಜ್ಜುಗೊಂಡಿದೆ. ಶ್ರೀಗಳ ಪುರಪ್ರವೇಶ ಅದ್ದೂರಿಯಾಗಿ ನಡೆದು ಚರಿತ್ರೆ ನಿರ್ಮಾಣವಾಗಿದ್ದು, ಜ.10 ರಿಂದ ಆರಂಭವಾದ ಹಸಿರುಹೊರೆಕಾಣಿಕೆ ಮಠಕ್ಕೆ ಹರಿದು ಬರುತ್ತಿದ್ದು, ಜ. 17 ರವರೆಗೂ ಹೊರೆಕಾಣಿಕೆ ಹರಿದುಬರಲಿದೆ.
ಈ ಬಾರಿಯ ಹಸಿರು ಹೊರೆಕಾಣಿಕೆಯಲ್ಲಿ ಸಂಗ್ರಹವಾದ ವಸ್ತುಗಳು ದಾಖಲೆ ನಿರ್ಮಾಣವಾಗಲಿದ್ದು, ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಭಕ್ತರಿಗೆ ಅನ್ನಸಂತರ್ಪಣೆಗೆ ಪೂರಕವಾಗಿ ಸಂಗ್ರಹ ನಡೆಯುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ವಿದ್ಯುತ್ದೀಪಅಲಂಕಾರದ ಉದ್ಘಾಟನೆ:
ಉಡುಪಿನಗರಸಭೆ ವತಿಯಿಂದ ಶಾಸಕರಾದ ಸುವರ್ಣ ಇವರ ನೇತೃತ್ವದಲ್ಲಿ ಪರ್ಯಾಯ ಮಹೋತ್ಸವದ ವಿದ್ಯುತ್ದೀಪ ಅಲಂಕಾರಕ್ಕೆ ರೂಪಾಯಿ 50 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಿದ್ದು ಜ.15 ರಂದು 2026 ಬುಧವಾರ ಸಂಜೆ ಸುಮಾರು 7 ಗಂಟೆಗೆ ಕೋರ್ಟ್ ಸಮೀಪ ಕೆನರಾ ಬ್ಯಾಂಕ್ ಎದುರುಗಡೆ ನೆರವೇರಲಿದೆ. ಇದರ ಉದ್ಘಾಟನೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನೆರವೇರಿಸಲಿದ್ದಾರೆ.
ಶ್ರೀಪರಶುರಾಮ ಸ್ವಾಗತ ಗೋಪುರದ ಶಿಲಾನ್ಯಾಸ:
ಉಡುಪಿಯ ದಕ್ಷಿಣಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ನಲ್ಲಿ ತುಳುನಾಡಿನ ಸೃಷ್ಟಿಕರ್ತರಾದ ಭಗವಾನ್ ಶ್ರೀ ಪರಶುರಾಮರ ಭವ್ಯ ಸ್ವಾಗತ ಗೋಪುರವನ್ನು ಶೀರೂರು ಮಠದ ದಿವಾನರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ನಿರ್ಮಿಸುವುದೆಂದು ನಿರ್ಧರಿಸಿದ್ದು ಇದರ ಶಿಲಾನ್ಯಾಸವನ್ನು ಸಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ಜ.16 (ಶುಕ್ರವಾರ) ಪೂರ್ವಾಹ್ನ 9 ಗಂಟೆಗೆ ದೇವತಾ ಪೂಜೆಯೊಂದಿಗೆ ನೆರವೇರಿಸಲಿದ್ದಾರೆ.
ಅನ್ನಸಂತರ್ಪಣೆ:
ಜ.17ರಂದು ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪ ಬೋರ್ಡ್ ಜೂನಿಯರ್ ಕಾಲೇಜು – ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷದಷ್ಟು ಜನರು ಭಾಗವಹಿಸುವ ನಿರೀಕ್ಷೆ ಇದೆ. ಜ.17 ರಿಂದ 22 ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಪರ್ಯಾಯ ಶೋಭಾಯಾತ್ರೆ:
ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳು ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ. ಇದರಲ್ಲಿ ಶ್ರೀಮದ್ವವಾದಿರಾಜ ಗುರುವರ್ಯರು ಶ್ರೀಶೀರೂರು ಮಠದ ಯತಿವರಿಯರ ಪರಂಪರೆ, ಪೌರಾಣಿಕ ಚಿತ್ರಗಳು ಎದ್ದುಕಾಣಲಿದ್ದು, ರಾಷ್ಟ್ರಾದ್ಯಂತ ಬಂದಂತಹ ಸಾಂಸ್ಕೃತಿಕ ತಂಡದಿಂದ ಪ್ರದರ್ಶನವನ್ನು ನೀಡಲಿದ್ದು ಸ್ಥಳೀಯ ಕರ್ನಾಟಕ ರಾಜ್ಯದ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಈ ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ.
ಶೋಭಾ ಯಾತ್ರೆ:
ಜ. 18 ರವಿವಾರ ಬೆಳಿಗ್ಗೆ ಎರಡು ಗಂಟೆಯಿಂದ ಆರಂಭವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಸಂಚರಿಸಲಿದ್ದು ಎಂದಿನಂತೆ ಕಲ್ಪನಾ ಜಂಕ್ಷನ್ ಮೂಲಕ ರಥಬೀದಿಗೆ ಸಾಗಲಿದೆ. ಮುಂದೆ ಶ್ರೀಕೃಷ್ಣಮಠದಲ್ಲಿ ದೇವತಾ ಕಾರ್ಯಗಳು ನಡೆದು ಶ್ರೀಗಳವರು ಸರ್ವಜ್ಞಪೀಠವನ್ನುಅಲಂಕಾರಿಸಲಿದ್ದಾರೆ.
ಪರ್ಯಾಯ ದರ್ಬಾರ್: ನೂತನವಾಗಿ ನಿರ್ಮಾಣಗೊಂಡಿರುವ ರಾಜಾಂಗಣದ ವೇದಿಕೆಯನ್ನು ಹೂ ಸಿಂಗಾರಗಳಿಂದ ಎಲ್ಲಾ ಮಠದ ಮಠಾಧೀಶರೊಂದಿಗೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಮುಂಜಾನೆ 5:30ಕ್ಕೆ ಆರಂಭವಾಗಲಿರುವ ದರ್ಬಾರ್ ಸಭೆ ಸುಮಾರು 9 ಗಂಟೆಯವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀಶ್ರೀ ವೇದವರ್ಧನತೀರ್ಥರು ಇತರ ಸ್ವಾಮೀಜಿಯವರೊಂದಿಗೆ ನಾಡಿನ ಗಣ್ಯರು ಉದ್ಯಮಿಗಳನ್ನು ಶ್ರೀಕೃಷ್ಣಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ವೇದವಿದ್ವಾಂಸರಿಂದ ಪ್ರವಚನ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಈ ಸಂದರ್ಭದಲ್ಲಿ ಭಾಗವಹಿಸಲಿರುವರು ದಿನಾಂಕ 18 ರಿಂದ ಪ್ರತಿದಿನ ಸಂಜೆ ಹತ್ತುದಿನಗಳ ಕಾಲ ಸಭಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಈ ಸಭೆಯಲ್ಲಿ ಕೂಡ ಅನೇಕ ಗಣ್ಯರಿಗೆ ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಶ್ರೀಕೃಷ್ಣಮಠ ಮಠದ ರಾಜಾಂಗಣ ಮತ್ತು ರಥಬೀದಿ ಸುತ್ತಮುತ್ತ ಹೂ ಮತ್ತು ವಿದ್ಯುತ್ದೀಪದಿಂದ ಅಲಂಕರಿಸಲಾಗುವುದು.
















