ಉಡುಪಿ: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎರಡನೇ ಹಂತದ ಕಚ್ಚಾತೈಲ ಸಂಗ್ರಹಣೆ ಕಾಮಗಾರಿಯನ್ನು ಕೈಗೊಳ್ಳುವಾಗ ಸ್ಥಳೀಯ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತೆಯನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಕಚ್ಚಾತೈಲ ಸಂಗ್ರಹಣೆ ಘಟಕದ ಎರಡನೇ ಹಂತದ ಕಾಮಗಾರಿ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಚ್ಚಾತೈಲ ಸಂಗ್ರಹಣಾ ಘಟಕದ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಯನ್ನು ಸಾರ್ವಜನಿಕರಿಂದ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಕೆಲವರಿಗೆ ಪರಿಹಾರದ ಹಣವನ್ನು ನೀಡಿರುವುದಿಲ್ಲ ಎಂದು ಕೇಳಿ ಬರುತ್ತಿದೆ. ಈ ಘಟಕಕ್ಕೆ ಭೂಮಿ ನೀಡಿರುವ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ಶೀಘ್ರದಲ್ಲಿಯೇ ನೀಡಬೇಕೆಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎರಡನೇ ಹಂತದ ಕಚ್ಚಾತೈಲ ಸಂಗ್ರಹಣಾ ಘಟಕದ ಕಾಮಗಾರಿಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಸುತ್ತಮುತ್ತ ಪ್ರದೇಶಗಳ ಮನೆಯ ವೀಡಿಯೋ ಚಿತ್ರೀಕರಣವನ್ನು ಕೈಗೊಳ್ಳಬೇಕು. ಕಾಮಗಾರಿ ಕೈಗೊಳ್ಳುವಾಗ ಬಂಡೆಗಳ ಸ್ಫೋಟ ಸಂದರ್ಭದಲ್ಲಿ ಯಾವುದೇ ರೀತಿಯ ಹಾನಿಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಭೂ ಸ್ವಾಧೀನದ ಪರಿಹಾರದ ಹಣವನ್ನು ಮಾಲೀಕರಿಗೆ ಒದಗಿಸುವ ಸಂಬಂಧ ನೈಜ ಭೂ ಮಾಲೀಕರ ಕುರಿತು ಇರುವ ಗೊಂದಲವನ್ನು ಸ್ಥಳೀಯ ಕಂದಾಯ, ಸರ್ವೇ ಹಾಗೂ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಪರಿಶೀಲಿಸಬೇಕು ಎಂದ ಅವರು, ಕಾಮಗಾರಿಯ ಸಂದರ್ಭದಲ್ಲಿ ಪಾರಂಪರಿಕ ತಾಣಗಳಿಗೆ ಹಾನಿಯಾಗದಂತೆ ರ್ಮವಹಿಸಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಚ್ಚಾತೈಲ ಸಂಗ್ರಹಣಾ ಘಟಕದ ಕಾಮಗಾರಿಯ ಸಂದರ್ಭದಲ್ಲಿ ಬಂಡೆ ಕಲ್ಲುಗಳನ್ನು ಸ್ಫೋಟಿಸುವುದರಿಂದ ಸ್ಥಳೀಯ ವ್ಯಾಪ್ತಿಯ ಬಾವಿಗಳಲ್ಲಿನ ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಕಾಮಗಾರಿ ಕೈಗೊಳ್ಳುವಾಗ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದಂತಹ ಕಾರ್ಮಿಕರುಗಳಿಗೆ ಪ್ರತ್ಯೇಕ ಕಾಲೋನಿಗಳನ್ನು ನಿರ್ಮಿಸಿ, ವಾಸವಿರಲು ಅನುವು ಮಾಡಿಕೊಡಬೇಕು ಎಂದ ಅವರು, ಕಾಮಗಾರಿ ಸಂಬಂಧ ವಾಹನಗಳ ಸಂಚಾರವು ಸುರಕ್ಷತೆಯಿಂದ ಚಲಿಸುವಂತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು, ಮೊದಲನೇ ಹಂತದ ಕಾಮಗಾರಿಯನ್ನು ಕೈಗೊಂಡಾಗ ಅನೇಕ ರೀತಿಯ ಸಮಸ್ಯೆಗಳು ಈ ಭಾಗದ ಜನರಿಗೆ ಉಂಟಾಗಿದ್ದವು. ಈ ಬಾರಿಯೂ ಅವು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ತಮ್ಮ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಮಂಜೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ, ಕೆ.ಐ.ಎ.ಡಿ.ಬಿ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
















