ಉಳ್ಳಾಲ: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಕೇರಳದ ಎರಿಮಲೆ ಬೆಟ್ಟವನ್ನು ಸೋಮವಾರ ಏರುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಕಾಡಿನ ದಾರಿಯಾಗಿ ಪಂಪೆಗೆ ಸಾಗುತ್ತಿದ್ದಾಗ ಕುಸಿದು ಬಿದ್ದರು.
ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಗಳವಾರ ಬೆಳಗ್ಗೆ ಪಾರ್ಥಿವ ಶರೀರ ಉಳ್ಳಾಲ ತಲುಪಲಿದೆ. ಚಂದ್ರಹಾಸ್ ಅವರು ಮೂಲತಃ ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಹತ್ತು ವರ್ಷದಿಂದ ಪತ್ನಿಯ ಊರು ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
















