ಕೋಟ: ಹಲ್ಲೆಗೈದು ಯುವಕನ ಕೊಲೆ: ನಾಲ್ವರ ಬಂಧನ

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕೆರೆಯಲ್ಲಿ ನಡೆದ ಸಂತೋಷ್ ಮೊಗವೀರ(30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು‌ ಮಂದಿ ಯುವಕರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಪಾರಂಪಳ್ಳಿ ಗ್ರಾಮದ ಪಡುಕರೆ ನಿವಾಸಿ ದರ್ಶನ್(21), ಸಾಸ್ತಾನ ನಿವಾಸಿ ಕೌಶಿಕ್(21), ಕೋಟತಟ್ಟು ಗ್ರಾಮದ ಅಂಕಿತ(19) ಹಾಗೂ ಕೋಟತಟ್ಟು ಗ್ರಾಮದ ಸುಜನ್(21) ಬಂಧಿತ ಆರೋಪಿಗಳು.

ಡಿ.14ರಂದು ಸಂಜೆ ವೇಳೆ ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್ ಗೆ ಬಂದು ಅಲ್ಲಿ ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್, ಸಂತೋಷ್ ಅವರ ಕುಟುಂಬದ ವಿಚಾರದಲ್ಲಿ ಮತ್ತು ಮದ್ಯಪಾನದ ವಿಚಾರದಲ್ಲಿ ವಾಗ್ವಾದ ಆಗಿ ಅವಾಚ್ಯ ಶಬ್ದಗಳಿಂದ ಬೈದು, ಸಂತೋಷನಿಗೆ ನಾಲ್ಕು ಜನರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದರಿಂದ ಪರಸ್ಪರ ದೂಡಾಡಿಕೊಂಡಿದ್ದು, ಬಳಿಕ ದರ್ಶನ್, ಸಂತೋಷನಿಗೆ ಕುತ್ತಿಗೆ ಹಿಂಬದಿ ಕೈಯಿಂದ ಬಲವಾಗಿ ಹೊಡೆದಿದ್ದನು. ಕೌಶಿಕನು ಕೈಯಿಂದ ಹೊಡೆದಿದ್ದನು. ರಜತ್ ಇವರ ಜಗಳವನ್ನು ನಿಲ್ಲಿಸಿದ್ದಾರೆ. ಆದರೆ ಅಷ್ಟರಲ್ಲಿ ಹಲ್ಲೆಗಳೊಗಾದ ಸಂತೋಷ್ ಅಲ್ಲಿಯೇ ಕುಸಿದು ಬಿದ್ದರೆಂದು ತಿಳಿದುಬಂದಿದೆ.

ಬಳಿಕ ಸಂತೋಷನನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಸಂತೋಷ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.