ಬೆಂಗಳೂರಿನ ಗಿರಿನಗರದ ಅಪಾರ್ಟ್ಮೆಂಟ್ ಬಳಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಮಾರ್ಗದ ಕಂಬದ ಮೇಲೆ ಕುಳಿತಿದ್ದ ಸುಮಾರು ₹2 ಲಕ್ಷ ಬೆಲೆ ಬಾಳುವ ವಿದೇಶಿ ತಳಿಯ ಗಿಳಿಯನ್ನು ರಕ್ಷಣೆ ಮಾಡಲು ಹೋದ ಯುವಕ, ವಿದ್ಯುತ್ ಆಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.
ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು. ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಸಂಬಂಧಿ ಲಿಖಿತಾ ಅವರು ಅಪಾರ್ಟ್ಮೆಂಟ್ನಲ್ಲಿ ನೆಲಸಿದ್ದರು. ವಿದೇಶಿ ಗಿಳಿಯೊಂದನ್ನು ಲಿಖಿತಾ ಸಾಕಿದ್ದರು. ಅಪಾರ್ಟ್ಮೆಂಟ್ ಪಕ್ಕದಲ್ಲಿಯೇ ಗಿಳಿ ಆಗಾಗ ಹಾರಾಟ ನಡೆಸುತ್ತಿತ್ತು. ಅರುಣ್ ಕುಮಾರ್ ಅವರೂ ಆ ಗಿಳಿಯನ್ನು ಮುದ್ದಿನಿಂದ ನೋಡಿಕೊಳ್ಳುತ್ತಿದ್ದರು ಎಂದು ಮೂಲಗಳು ಹೇಳಿವೆ.

















