ಕರಾವಳಿಯಾದ್ಯಂತ ಮಳೆ: ಅಲ್ಲಲ್ಲಿ ಹಾನಿ

ಉಡುಪಿ: ಕರಾವಳಿಯಲ್ಲಿ ಮಳೆ ಮುಂದುವರಿದ್ದು, ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ವನಜ ಪೂಜಾರ್ತಿ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ತಗ್ಗುಪ್ರದೇಶ ಕೃಷಿ ಗದ್ದೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಕಟಾವಿಗೆ ಬಂದಿದ್ದ
ಭತ್ತ ಬೆಳೆಗೆ ಹಾನಿ ಆಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಉಡುಪಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಜೋರಾಗಿ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 81.20 ಮಿ.ಮೀ ಸರಾಸರಿ ಮಳೆಯಾಗಿದ್ದು, ಉಡುಪಿಯಲ್ಲಿ 97.1, ಕುಂದಾಪುರದಲ್ಲಿ 86.4 ಹಾಗೂ ಕಾರ್ಕಳದಲ್ಲಿ 59.7 ಮಿ.ಮೀ ಮಳೆ ಸುರಿದಿದೆ.
ಅಲರ್ಟ್‌:
ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಗಳ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಜತೆಗೆ, ಮೀನುಗಾರರು ನದಿ ಹಾಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ನೆರೆ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.