ಉಡುಪಿ: ಭಾರತ ದೇಶದಲ್ಲಿ ಗೋ ಮಾಂಸ ರಫ್ತು ಹಾಗೂ ಜಾನುವಾರು ಹತ್ಯೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಕಾಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾನುವಾರುಗಳನ್ನು ಹತ್ಯೆಗೈದು ಅವುಗಳ ಮಾಂಸ ಮತ್ತು ಚರ್ಮವನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗೆ ಕಳಂಕಪ್ರಾಯವಾಗಿದೆ. ಗೋ ಮಾಂಸ ರಫ್ತಿನಿಂದ ದೇಶದಲ್ಲಿ ಗೋವು ಹಾಗೂ ಪ್ರಾಣಿಗಳ ಸಂತತಿ ಅತಿವೇಗವಾಗಿ ಕ್ಷೀಣಿಸುತ್ತಿದ್ದು, ಇದರಿಂದ ದೇಶದ ಅರ್ಥವ್ಯವಸ್ಥೆಗೆ ದೊಡ್ಡ ದುಷ್ಪರಿಣಾಮ ಬೀರಲಿದೆ ಎಂದರು.
ಕೇವಲ ಗೋ ಮಾಂಸ ಮಾತ್ರವಲ್ಲ, ಭಾರತದಿಂದ ಯಾವುದೇ ಪ್ರಾಣಿಗಳ ಮಾಂಸ ಮತ್ತು ಚರ್ಮ ಹಾಗೂ ಮಾಂಸೋತ್ಪನ್ನಗಳ ರಫ್ತನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಷೇಧಿಸಬೇಕು. ಭಾರತವನ್ನು ಗೋ ಮಾಂಸ ರಫ್ತು ಮುಕ್ತ ಹಾಗೂ ಸಂಪೂರ್ಣ ಗೋವಂಶ-ಜಾನುವಾರು ಹತ್ಯೆ ಮುಕ್ತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೂ ಈ ಮೂಲಕ ಮನವಿ ಮಾಡುತ್ತೇನೆ ಎಂದರು.


















