ಕುಂದಾಪುರ:ಬಾವಿಗೆ ಬಿದ್ದು ವಿದ್ಯಾರ್ಥಿ ಮೃತ್ಯು

ಕುಂದಾಪುರ: ವಿದ್ಯಾರ್ಥಿಯೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ.6ರಂದು ಸಂಜೆ ವೇಳೆ ಕೋಣಿ ಎಂಬಲ್ಲಿ ನಡೆದಿದೆ.

ಮೃತರನ್ನು ಕೋಣಿ ಗ್ರಾಮದ ಸತೀಶ್ ಪೂಜಾರಿ ಎಂಬವರ ಮಗ ಮನೀಷ್ (14) ಎಂದು ಗುರುತಿಸಲಾಗಿದೆ. ಇವರು ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದು, ಸಂಜೆ ಶಾಲೆಯಿಂದ ಮನೆಗೆ ಬಂದ ಮನೀಷ ನಾಪತ್ತೆಯಾಗಿದ್ದನು. ನೆರೆಮನೆಯ ಬಾವಿಯಲ್ಲಿ ಅಗ್ನಿಶಾಮಕ ದಳದವರನ್ನು ಕರೆಯಿಸಿ ಹುಡುಕಾಟ ನಡೆಸಿದಾಗ ಮನೀಷನ ಮೃತದೇಹ ಪತ್ತೆಯಾಗಿದೆ.

ಈತ ಮನೆಯ ಅಂಗಳದಲ್ಲಿದ್ದ ಬಾವಿಯ ದಂಡೆ ಮೇಲೆ ಕುಳಿತಾಗ ಆಯತಪ್ಪಿ ಬಿದ್ದಿರಬಹುದು ಅಥವಾ ಹಾರಿ ಮೃತಪಟ್ಟಿರಬಹುದೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.