ನ.7 ಮತ್ತು 8ರಂದು ನಿಟ್ಟೆ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ

ಉಡುಪಿ: ನಿಟ್ಟೆ ವಿಶ್ವವಿದ್ಯಾನಿಲಯದ ಮಂಗಳೂರು ಕ್ಯಾಂಪಸ್​ನಲ್ಲಿ ನ.7ರಂದು ಮತ್ತು ನಿಟ್ಟೆ ಕ್ಯಾಂಪಸ್​ಗಳಲ್ಲಿ ನ.8 ರಂದು 15ನೇ ವಾರ್ಷಿಕ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಒಟ್ಟು 1, 999 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಕುಲಪತಿ ಪ್ರೊ. ಡಾ. ಎಂ. ಎಸ್​. ಮೂಡಿತ್ತಾಯ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ. 7ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್​. ಹೆಗ್ಡೆ ವೈದ್ಯಕಿಯ ಕಾಲೇಜಿನ (ಕ್ಷೇಮ) ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ನ. 8ರಂದು ಬೆಳಿಗ್ಗೆ 10.30ಕ್ಕೆ ಕಾರ್ಕಳದ ನಿಟ್ಟೆಯ ಕ್ಯಾಂಪಸ್​ನಲ್ಲಿ ಘಟಿಕೋತ್ಸವ ನಡೆಯಲಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್​. ವಿನಯ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಪ್ರತಿಷ್ಠಿತ ಶಿಕ್ಷಣ ತಜ್ಞ ಪ್ರೊ. ಡಾ. ಸಿದ್ದು ಪಿ. ಅಲ್ಲೂರ್​ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಹ ಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಹಾಗೂ ಕುಲಾಧಿಪತಿ (ಆಡಳಿತ)ವಿಶಾಲ್​ ಹೆಗ್ಡೆ ಉಪಸ್ಥಿತರಿರುವರು ಎಂದರು.

ಮಂಗಳೂರಿನ ಕ್ಯಾಂಪಸ್​ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕಿಯ, ಔಷಧ ವಿಜ್ಞಾನ, ನರ್ಸಿಂಗ್​. ಫಿಸಿಯೋಥೆರಪಿ, ಅರೆ ವೈದ್ಯಕೀಯ ವಿಜ್ಞಾನ, ಮಾನವಿಕ, ಜೀವವಿಜ್ಞಾನ, ವಾಸ್ತುಶಿಲ್ಪ, ವಾಕ್​ ಮತ್ತು ಶ್ರವಣ, ಅತಿಥ್ಯ ನಿರ್ವಹಣೆ ನಿಕಾಯ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುವುದು.

ನಿಟ್ಟೆಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಕಂಪ್ಯೂಟರ್​ ಅಪ್ಲಿಕೇಶನ್ಸ್​, ಎಂಜಿನಿಯರಿಂಗ್​ ಮತ್ತು ಟೆಕ್ನಾಲಜಿ, ವ್ಯವಹಾರ ಆಡಳಿತ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯ ವಿಷಯಗಳ ಪದವಿ ಪ್ರದಾನ ನಡೆಯಲಿದೆ. ಒಟ್ಟಾರೆಯಾಗಿ 31 ಪಿಎಚ್​ಡಿ ಪದವಿಗಳು, 907 ಸ್ನಾತಕೋತ್ತರ ಪದವಿಗಳು. 1054 ಸ್ನಾತಕ ಪದವಿಗಳು, 5 ಫೆಲೋಶಿಪ್​ಗಳು ಮತ್ತು 2 ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು. ವಿದ್ಯಾರ್ಥಿಗಳಿಗೆ 51 ಚಿನ್ನದ ಪದಕ ನೀಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಡಾ. ಪ್ರಸಾದ್​ ಬಿ. ಶೆಟ್ಟಿ, ಇಂಜಿನಿಯರಿಂಗ್​ ಕಾಲೇಜು ಪ್ರಾಂಶುಪಾಲ ಡಾ. ನಿರಂಜನ್​ ಚಿಪ್ಲೂಂಕರ್​, ಡಾ. ಸುಧೀರ್​ ಎಂ. ಉಪಸ್ಥಿತರಿದ್ದರು.