ಉಡುಪಿ: ನ.7ರಂದು ಶೀರೂರು ಪರ್ಯಾಯ ಪೂರ್ವಭಾವಿ ಸಮಾಲೋಚನಾ ಸಭೆ

ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಇದೇ ನ. 7ರಂದು ಸಂಜೆ 4.30ಕ್ಕೆ ಉಡುಪಿಯ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು.

ಉಡುಪಿ ಶೀರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪರ್ಯಾಯ ಪೂರ್ವಭಾವಿ ಬಗ್ಗೆ ಪ್ರಮುಖರೊಂದಿಗೆ ಚರ್ಚೆ ನಡೆಯಲಿದೆ. ಈ ಬಾರಿಯ ಶೀರೂರು ಪರ್ಯಾಯ ನಮ್ಮ ಪರ್ಯಾಯ ಎಂಬ ಧ್ಯೇಯವಾಕ್ಯದೊಂದಿಗೆ ಉಡುಪಿ ಜಿಲ್ಲೆಯ ಪ್ರತಿ ಮನೆಗಳಿಗೂ ಆಮಂತ್ರಣ ಪತ್ರಿಕೆಗಳನ್ನು ತಲುಪಿಸಲಾಗುವುದು. ಅಲ್ಲದೆ, ಜಿಲ್ಲೆಯ ಪ್ರತಿಯೊಂದು ಮನೆಯವರು ಕೂಡಾ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಈ ಬಾರಿ ವಿಶೇಷವಾಗಿ ಹೊರಕಾಣಿಕೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಜಿಲ್ಲೆಯನ್ನು ಎಂಟು ವಲಯಗಳನ್ನಾಗಿ ಮಾಡಿ ಪ್ರತೀ ಮನೆಯಿಂದಲೂ ಹೊರಕಾಣಿಕೆಯನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಧರ್ಮಸ್ಥಳ, ಕಟೀಲು,ಮಂಗಳೂರು, ಪುತ್ತೂರು ವಲಯಗಳಿಂದ ದೊಡ್ಡ ಪ್ರಮಾಣದ ಹೊರಕಾಣಿಕೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಪರ್ಯಾಯ ಪೀಠಾರೋಹಣಗೈಯಲಿರುವ ಶೀರೂರು‌ ಶ್ರೀಗಳು ಜನವರಿ 9ರಂದು ಪುರಪ್ರವೇಶ ಮಾಡಲಿದ್ದು, ಅಂದು ಸಂಜೆ 3:30ಕ್ಕೆ ಉಡುಪಿಯ ಕಡಿಯಾಳಿಯಲ್ಲಿ ಶ್ರೀಗಳನ್ನು ಬರಮಾಡಿಕೊಂಡು, ಸಮಾಜದ ಪ್ರಮುಖರು, ಧಾರ್ಮಿಕ ಮುಖಂಡರನ್ನು ಒಳಗೊಂಡಂತೆ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಕರೆತರಲಾಗುವುದು. ಬಳಿಕ ಉಡುಪಿ ನಗರಸಭೆ ವತಿಯಿಂದ ಭಾವೀ ಪರ್ಯಾಯ ಶ್ರೀಗಳಿಗೆ ರಥಬೀದಿಯಲ್ಲಿ ಪೌರ ಸಮ್ಮಾನ ನಡೆಯಲಿದೆ. ಜನವರಿ10ರಿಂದ 17ರ ವರೆಗೆ ಪ್ರತಿದಿನ ಅದ್ದೂರಿಯ ಹೊರೆ ಕಾಣಿಕೆಯ ಮೆರವಣಿಗೆ ನಡೆಯಲಿದೆ.

ಹೊರಕಾಣಿಕೆಯಲ್ಲಿ ಬಂದ ಎಲ್ಲಾ ಪರಿಕರಗಳನ್ನು ಶ್ರೀಮಠದ ವಾಹನ ನಿಲುಗಡೆ ಸಮೀಪ ( ರಾಜಾಂಗಣ ಪಾರ್ಕಿಂಗ್) ಅಚ್ಚುಕಟ್ಟಾಗಿ ಜೋಡಿಸಿ ಅಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಹೊರೆಕಾಣಿಕೆ ಸಂಚಾಲಕ ಸುಪ್ರಸಾದ ಶೆಟ್ಟಿ, ಕಿರಣ್ ಕುಮಾರ್ ಉಪಸ್ಥಿತರಿದ್ದರು.