ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ತುಳಸೀ ಪೂಜೆ, ಕ್ಷೀರಾಬ್ದಿ ಪೂಜೆ, ತೆಪ್ಪೋತ್ಸವ ಸಹಿತ ವಾರ್ಷಿಕ ಲಕ್ಷದೀಪೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ದ್ವಾದಶಿಯಾದ ಕಾರಣ ಮುಂಜಾನೆಯಿಂದಲೇ ಪೂಜೆಗಳು ಆರಂಭಗೊಂಡವು. ಮಹಾಪೂಜೆಯನ್ನು ನಡೆಸಿದ ಬಳಿಕ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ತುಳಸೀ ಪೂಜೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಒಂದು ತಿಂಗಳಿನಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆಯನ್ನು ಶ್ರೀಪಾದರು ಸಮಾಪನಗೊಳಿಸಿದರು.
ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ದಿ ಅರ್ಘ್ಯವನ್ನು ನೀಡಲಾಯಿತು. ಮಧ್ಯಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಸ್ವಾಮೀಜಿ ನೆರವೇರಿಸಿದರು. ಸಂಜೆ ಕ್ಷೀರಾಬ್ದಿ ಪೂಜೆ ಬಳಿಕ ರಾತ್ರಿ ಪೂಜೆ ನಡೆಯಿತು. ಪೂಜೆಯ ಬಳಿಕ ಉತ್ಸವ ಮೂರ್ತಿಯನ್ನು ತಂದು ರಾತ್ರಿ ಆಕರ್ಷಕ ತೆಪ್ಪೋತ್ಸವವು ಮಧ್ವ ಸರೋವರದಲ್ಲಿ ದಾಸರ ಹಾಡುಗಳ ಸುಮಧುರ ಗಾಯನದೊಂದಿಗೆ ವೈಭವದಿಂದ ನೆರವೇರಿತು. ತೆಪ್ಪವನ್ನು ಪಾರ್ಥ ಸಾರಥಿಯಾಗಿ ಅಲಂಕರಿಸಲಾಗಿತ್ತು. ಬಳಿಕ ರಥೋತ್ಸವ ನಡೆಯಿತು.
ಶ್ರೀಕೃಷ್ಣಮುಖ್ಯಪ್ರಾಣ, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಗರುಡ ರಥ ಮತ್ತು ಮಹಾಪೂಜಾ ರಥಗಳಲ್ಲಿರಿಸಿ ಉತ್ಸವ ನಡೆಸಲಾಯಿತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳನ್ನು ಭಕ್ತರು ಹಚ್ಚಿದರು. ಉತ್ಸವದಲ್ಲಿ ಪರ್ಯಾಯ ಶ್ರೀಗಳು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಪಾಲ್ಗೊಂಡರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಧ್ಯಾಹ್ನ ಹಣತೆ ಇಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೋಮವಾರ ಆರಂಭಗೊಂಡ ಲಕ್ಷ ದೀಪೋತ್ಸವವು ನ. 5ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
























