ಚೆನ್ನೈ: ಕ್ರಿಪ್ಟೋಕರೆನ್ಸಿಯು ಭಾರತೀಯ ಕಾನೂನಿನಡಿ ‘ಆಸ್ತಿ’ ಎನಿಸಿಕೊಳ್ಳಲಿದ್ದು ಅದರ ಒಡೆತನ ಮತ್ತು ಹಸ್ತಾಂತರ ಮಾಡಬಹುದಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಶನಿವಾರ (ಅ.26) ತೀರ್ಪು ನೀಡಿದೆ.
ಕ್ರಿಪ್ಟೋಕರೆನ್ಸಿ ಅಮೂರ್ತವಾಗಿದ್ದು ಕಾನೂನುಬದ್ಧ ನಗದು ಅಲ್ಲದಿದ್ದರೂ, ಅದು ಆಸ್ತಿಯ ಅಗತ್ಯ ಗುಣಲಕ್ಷಣ ಹೊಂದಿದೆ. ಅದು ಅನುಭವಿಸಲು ಮತ್ತು ಒಡೆತನ ಹೊಂದಲು ಸಾಧ್ಯವಿರುವ ಆಸ್ತಿಯಾಗಿದೆ. ಅದನ್ನು ಹಸ್ತಾಂತರ ಕೂಡ ಮಾಡಬಹುದಾಗಿದೆ ಎಂದು ನ್ಯಾ. ಆನಂದ್ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ. 2024ರಲ್ಲಿ ನಡೆದ ಸೈಬರ್ ದಾಳಿಯ ನಂತರ ವಜಿರ್ಎಕ್ಸೃ್ ವೇದಿಕೆಯಲ್ಲಿ ಕ್ರಿಪ್ಟೋಕರೆನ್ಸಿ ಮೊತ್ತ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಬಂದಿದೆ.
ಅರ್ಜಿದಾರರು 2024ರ ಜನವರಿಯಲ್ಲಿ ಜನ್ಮೈ ಲ್ಯಾಬ್ಸ್ ನಿರ್ವಹಿಸುವ ವಜಿರ್ಎಕ್ಸೃ್ ವಿನಿಮಯ ವೇದಿಕೆಯಲ್ಲಿ 1,98,516 ರೂ. ಹೂಡಿಕೆ ಮಾಡಿ 3,532.30 ಕ್ರಿಪ್ಟೋಕರೆನ್ಸಿ ನಾಣ್ಯಗಳನ್ನು ಖರೀದಿಸಿದ್ದರು. ತಾನು ಕ್ರಿಪ್ಟೋಕರೆನ್ಸಿ ಸಂಗ್ರಹಿಸಿಡುವ ವ್ಯವಸ್ಥೆ (ಕೋಲ್ಡ್ ವ್ಯಾಲೆಟ್) ಸೈಬರ್ ದಾಳಿಗೆ ತುತ್ತಾದ ಪರಿಣಾಮ ಎಥೆರಿಯಮ್ ಕ್ರಿಪ್ಟೋಕರೆನ್ಸಿ ನಷ್ಟವಾಗಿದೆ. ತನಗೆ 230 ದಶಲಕ್ಷ ಡಾಲರ್ ಹಾನಿ ಉಂಟಾಗಿದೆ ಎಂದು 2024ರ ಜು. 18ರಂದು, ವಜಿರ್ಎಕ್ಸ್ ತನ್ನ ಜಾಲತಾಣದಲ್ಲಿ ಪ್ರಕಟಿಸಿತು. ನಂತರ ಎಲ್ಲ ಬಳಕೆದಾರರ ಖಾತೆ ಸ್ಥಗಿತಗೊಳಿಸಿತು. ಪರಿಣಾಮ ಬಳಕೆದಾರರು ಕ್ರಿಪ್ಟೋಕರೆನ್ಸಿ ಇರಿಸಿದ್ದ ಖಾತೆ ಬಳಸುವುದಕ್ಕೆ ಅಥವಾ ಅವುಗಳನ್ನು ಮಾರಾಟ ಮಾಡುವುದಕ್ಕೆ ಅಡ್ಡಿ ಉಂಟಾಯಿತು. ಆದರೆ ಸೈಬರ್ ದಾಳಿಗೆ ತುತ್ತಾದ ಎಥೆರಿಯಮ್ ಟೋಕನ್ಗಳಿಗಿಂತಲೂ ತಮ್ಮ ಸ್ವತ್ತು ಭಿನ್ನವಾದುವು. ಹೀಗಾಗಿ ತಮ್ಮ ಖಾತೆಯನ್ನು ವಜಿರ್ಎಕ್ಸ್ ಮರುಹಂಚಿಕೆ ಅಥವಾ ಪುನರ್ನಿಯುಕ್ತಿ ಮಾಡದಂತೆ 1996ರ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 9ರ ಪ್ರಕಾರ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಕೋರಿದ್ದರು.
ಪ್ರತಿವಾದಿಗಳಾದ ನಿಶ್ಚಲ್ ಶೆಟ್ಟಿ ಸೇರಿದಂತೆ ವಜಿರ್ಎಕ್ಸ್ನ ಸಿಂಗಾಪುರ ಮೂಲದ ಮಾತೃ ಕಂಪನಿ ಜನ್ಮೈ ಲ್ಯಾಬ್ಸ್ ನಿರ್ದೇಶಕರು ಈ ಕೋರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಸೈಬರ್ ದಾಳಿಯ ನಂತರ ಝೆಟ್ಟೈ ಪ್ರೈ.ಲಿ. ಪುನಾರಚನೆ ಪ್ರಕ್ರಿಯೆ ಆರಂಭಿಸಿದ್ದು ಸಿಂಗಾಪುರ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಎಲ್ಲ ಬಳಕೆದಾರರು ನಷ್ಟವನ್ನು ಅನುಪಾತದ ಆಧಾರದ ಮೇಲೆ ಹಂಚಿಕೊಳ್ಳುವ ಅಗತ್ಯವಿದೆ. ಕ್ರಿಪ್ಟೋವ್ಯಾಲೆಟ್ಗಳನ್ನು ಝೆಟ್ಟೈ ನಿರ್ವಹಿಸುತ್ತಿದ್ದು ಜನ್ಮೈ ಲ್ಯಾಬ್ಸ್ ಭಾರತೀಯ ರೂಪಾಯಿ ವಹಿವಾಟುಗಳನ್ನು ಮಾತ್ರ ನಿರ್ವಹಿಸುತ್ತಿದೆ. ಸ್ವತ್ತುಗಳನ್ನು ಹೇಗೆ ವಿತರಿಸಬೇಕೆಂದು ಸಿಂಗಾಪುರದಲ್ಲಿ ವಿಚಾರಣೆ ನಡೆದು ತೀರ್ಪು ಬಂದಿದೆ ಎಂದು ಅವರು ವಾದಿಸಿದರು.
ಈ ಬಗ್ಗೆ 54 ಪುಟಗಳ ತೀರ್ಪು ನೀಡಿರುವ ನ್ಯಾ. ವೆಂಕಟೇಶ್, ಕ್ರಿಪ್ಟೋಕರೆನ್ಸಿ ಎಂಬುದು ಆಸ್ತಿಯ ಸ್ಥಾಪಿತ ಕಾನೂನು ಕಲ್ಪನೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ವಿವರಿಸಿದ್ದಾರೆ. ಕ್ರಿಪ್ಟೋಕರೆನ್ಸಿಗಳು ಕೇವಲ ದತ್ತಾಂಶವನ್ನು ಒಳಗೊಂಡಿದ್ದರೂ ಅವು ಸ್ಪಷ್ಟವಾಗಿ ಗುರುತಿಸಬಹುದಾದ, ಹಸ್ತಾಂತರಿಸಬಹುದಾದ ಮತ್ತು ಖಾಸಗಿ ಕೀ ಮೂಲಕ ನಿಯಂತ್ರಿಸಬಹುದಾದ ಸ್ವತ್ತು ಎಂದು ಅವರು ಹೇಳಿದ್ದಾರೆ.
ಅಹ್ಮದ್ ಜಿ.ಎಚ್. ಆರಿಫ್ ವರ್ಸಸ್ ಸಿಡಬ್ಲ್ಯೂಟಿ ನಡುವಿನ ಪ್ರಕರಣದಲ್ಲಿ ನೀಡಿದ ತೀರ್ಪು ಹಾಗೂ ಜಿಲುಭಾಯಿ ನಾನ್ಭಾಯಿ ಖಾಚರ್ ವರ್ಸಸ್ ಗುಜರಾತ್ ಸರ್ಕಾರ ನಡುವಿನ ಪ್ರಕರಣದಲ್ಲಿಯೂ ಇಂತಹುದೇ ಆದೇಶ ಬಂದಿದೆ. ಅಲ್ಲದೆ ಕ್ರಿಪ್ಟೋಕರೆನ್ಸಿ ಹಸ್ತಾಂತರಿಸಬಹುದಾದ ಸ್ವತ್ತು ಎಂಬುದಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಹೈಕೋರ್ಟ್ಗಳು ಕೂಡ ಹೇಳಿವೆ ಎಂದು ನ್ಯಾ. ವೆಂಕಟೇಶ್ ತಿಳಿಸಿದ್ದಾರೆ.


















