ಕೊಟ್ಟ ಸಾಲ ಮರುಪಾವತಿಸದಕ್ಕೆ ಸ್ನೇಹಿತನ ಕೊಲೆ!

ಸಾಲವಾಗಿ ಕೊಟ್ಟ ಹಣ ಮರುಪಾವತಿಸದ ಸ್ನೇಹಿತನಿಗೆ ತನ್ನ ಸ್ನೇಹಿತನೇ ಚಟ್ಟ ಕಟ್ಟಿ ಪೊಲೀಸರಿಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಘಟನೆ ನಡೆದಿದ್ದು ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗಿರಿಯಾಲ‌ ಗ್ರಾಮದ ಮಂಜುನಾಥ ಗೌಡರ (30) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಕಳೆದ ವಾರ ಸ್ನೇಹಿತ ದಯಾನಂದ ಗುಂಡ್ಲೂರನಿಂದ 2 ಸಾವಿರ ಹಣ ಸಾಲವನ್ನಾಗಿ ಮಂಜುನಾಥ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಇದೇ ಹಣದ ವಿಚಾರಕ್ಕೆ ಮಂಜುನಾಥ ‌ಹಾಗೂ ದಯಾನಂದ ಮಧ್ಯೆ ಜಗಳ ಆಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ‌ನನ್ನು ದಯಾನಂದ ಕೊಲೆ ಮಾಡಿದ್ದಾನೆ.

ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿ‌ನ ಜಾವ ಕೊಡ್ಲಿಯಿಂದ ಹೊಡೆದು ಮಂಜುನಾಥ‌ನ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಉಸಿರು ಚಲ್ಲಿದ್ದಾನೆ. ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿದು ಪೊಲೀಸರಿಗೆ ಸ್ವಯಂ ಪ್ರೇರಿತವಾಗಿ ಹೋಗಿ ದಯಾನಂದ ಶರಣಾಗಿದ್ದಾನೆ.