ರಾಜಸ್ಥಾನ: ತಂದೆ ಅಂತ್ಯ ಸಂಸ್ಕಾರದ ವೇಳೆ ಅಣ್ಣನನ್ನೇ ಕೊಚ್ಚಿ ಕೊಂದನು!

ಜೈಪುರ, ರಾಜಸ್ಥಾನ: ತಂದೆಯ ಅಂತ್ಯಸಂಸ್ಕಾರ ಖರ್ಚಿನ ವಿಚಾರಕ್ಕೆ ನಡೆದ ಜಗಳದಲ್ಲಿ ಹಿರಿಯಣ್ಣನನ್ನು ಸಹೋದರನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ರಾಜಸ್ಥಾನದ ಬರ್ಮೇರ್‌ನಲ್ಲಿ ನಡೆದಿದೆ.ಇಲ್ಲಿನ ಬೀಜರಾದ್‌ ‍ಪೊಲೀಸ್‌ ಠಾಣಾ ವ್ಯಾಪ್ತಿಯ ನವತ್ಲಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

‘ಅಂತ್ಯಕ್ರಿಯೆ ಖರ್ಚಿನ ವಿಚಾರವಾಗಿ ಗಣೇಶ್‌ರಾಮ್‌ (35) ಹಾಗೂ ಅವರ ಕಿರಿಯ ಸಹೋದರ ಕಿಶನ್‌ ರಾಮ್‌ (30) ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ವಿಕೋಪಕ್ಕೆ ತಿರುಗಿದ ಪರಿಣಾಮ, ಕಿಶನ್‌ರಾಮ್‌ ತನ್ನ ಸಹೋದರ ಮೇಲೆ ಕೊಡಲಿಯಿಂದ ಹಿಂದಿನಿಂದ ದಾಳಿ ನಡೆಸಿದ್ದಾನೆ. ಇದರಿಂದ, ಅವರು ಕುಸಿದುಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.

‘ಕೃಷಿಕರಾಗಿದ್ದ ಗಣೇಶ್‌ ತನ್ನ ತಾಯಿ ಹಾಗೂ ಸಹೋದರನ ಜೊತೆಗೆ ವಾಸವಾಗಿದ್ದರು. 2019ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ಆರೋಪಿಯ ಪತ್ತೆಗೆ ಪ್ರತ್ಯೇಕ ತಂಡವನ್ನು ನಿಯೋಜಿಸಲಾಗಿದೆ’ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.