ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಮೃತ್ಯು.

ಸುಳ್ಯ: ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಚಾಂದಿನಿ (38) ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ನಾವೂರಿನ ದಿ.ಧನಂಜಯ ಮತ್ತು ಸರೋಜಿನಿ ದಂಪತಿ ಪುತ್ರಿಯಾದ ಚಾಂದಿನಿ ಇಪ್ಪತ್ತಕ್ಕೂ ಅಧಿಕ ಬಾರಿ ಶಸ್ತ್ರಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೀಟ್‌ಮೆಂಟ್, ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸಿದರೂ ಆರೋಗ್ಯದಲ್ಲಿ ಸುಧಾರಣೆ ಆಗಿರಲಿಲ್ಲ.

ರಾಜ್ಯ ಸರ್ಕಾರ ಉಚಿತ ಚಿಕಿತ್ಸೆಯ ಭರವಸೆ ನೀಡಿದ್ದರೂ ಅದರ ಅನುಷ್ಠಾನದಲ್ಲಿ ಹಲವು ತೊಡಕು ಇದ್ದವು. ಆರ್ಥಿಕ ನೆರವಿನ ದಾರಿ ಕಾಣದಾದಾಗ ದಯಾಮರಣಕ್ಕೆ ಅವರು ಮನವಿ ಮಾಡಿಕೊಂಡಿದ್ದರು.

ಸರ್ಕಾರದ ವಿವಿಧ ಇಲಾಖೆ, ಯೋಜನೆಗಳು ಅಲ್ಲದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಹಿತ ನೂರಾರು ಮಂದಿ ಚಾಂದಿನಿಗೆ ಧನ ಸಹಾಯ ಮಾಡಿದ್ದರು.

ಇವರು ತಾಯಿ ಸರೋಜಿನಿ, ಪತಿ ಪುರುಷೋತ್ತಮ್, ಪುತ್ರಿ ಚಾನ್ವಿ ಅವರನ್ನು ಅಗಲಿರುತ್ತಾರೆ.