ಉಡುಪಿ: ದೇಶದ ಸುಭಿಕ್ಷೆ, ಸನಾತನ ಧರ್ಮದ ರಕ್ಷಣೆಗಾಗಿ ಮನ್ಯುಸೂಕ್ತ ಪುನಶ್ಚರಣ ಹೋಮ

ಉಡುಪಿ: ಭಾರತ ದೇಶದ ಸುಭಿಕ್ಷೆ ಕ್ಷೇಮ‌, ಸಮೃದ್ಧಿ ಹಾಗೂ ಸನಾತನ ಧರ್ಮಕ್ಕೆ ಎದುರಾಗುತ್ತಿರುವ ಹಾನಿಗಳಿಂದ ರಕ್ಷಣೆಗಾಗಿ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಮಾರು 300ಕ್ಕೂ ಅಧಿಕ ಋತ್ವಿಜರು ವೈದಿಕರಿಂದ ಮನ್ಯುಸೂಕ್ತ ಪುನಶ್ಚರಣ ಹೋಮವನ್ನು ನಡೆಸಲಾಯಿತು.‌ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪೇಜಾವರ ಶ್ರೀ ಅದಮಾರು ಹಾಗೂ ಶ್ರೀ ಕಾಣಿಯೂರು ಮಠಾಧೀಶರ ಪೂರ್ಣಾನುಗ್ರಹಪೂರ್ವಕ ಸಹಕಾರದೊಂದಿಗೆ ಈ ಹೋಮವನ್ನು ನಡೆಸಲಾಯಿತು.

25 ಯಜ್ಞ ಕುಂಡಗಳಲ್ಲಿ ಈ ಯಾಗ ಹಾಗೂ ಮಹಾಗಣಪತಿ ಹೋಮ ನಡೆಯಿತು.‌ ಶ್ರೀ ಪೇಜಾವರ ಮಠದ ಪಟ್ಟದ ಶ್ರೀ ಕೋದಂಡರಾಮ, ಪಾಂಡುರಂಗ ವಿಠಲ ದೇವರ ಪೂಜೆಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು ಭಾಗವಹಿಸಿದರು. ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಬೆಳಿಗ್ಗೆ ಸರ್ವಜ್ಞ ಪೀಠದಲ್ಲಿ ಶ್ರೀ ಕೃಷ್ಣನ ಗರ್ಭಗುಡಿಯಿಂದ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿ ದೀಪವನ್ನು ವೈದಿಕರಿಗೆ ಹಸ್ತಾಂತರಿಸಿದರು.‌ ಅದೇ ದೀಪವನ್ನು ಸಗ್ರಿಯ ಯಜ್ಞ ಶಾಲೆಗೆ ತಂದು ಯಜ್ಞಾಗ್ನಿಯನ್ನು ಜ್ವಲಿಸಲಾಯಿತು.

ನಾಗಪಾತ್ರಿ ಗೋಪಾಲಕೃಷ್ಣ ಸಾಮಗ ದಂಪತಿ ಸಂಕಲ್ಪ ನೆರವೇರಿಸಿದರು. ಶಿಬರೂರು ವೇದವ್ಯಾಸ ತಂತ್ರಿ ಪಾಡಿಗಾರು ಶ್ರೀನಿವಾಸ ತಂತ್ರಿ , ಕುಮಾರಗುರು ತಂತ್ರಿ ಮಟ್ಟು ಪ್ರವೀಣ ತಂತ್ರಿ , ಹೆರ್ಗ ಜಯರಾಮ‌ ತಂತ್ರಿ ರವೀಂದ್ರ ಭಟ್ ಸಹಿತ 25 ಮಂದಿ ವೇದಾ‌ಗಮ ವಿದ್ವಾಂಸರು ಪ್ರಧಾನ ಋತ್ವಿಜರಾಗಿ ಭಾಗವಹಿಸಿದರು.‌

ಸುಬ್ರಹ್ಮಣ್ಯ ಸಾಮಗ , ಜ್ಯೋತಿಷ ವಿದ್ವಾನ್ ಗೋಪಾಲ‌ಜೋಯಿಸ್ , ಶಿವಪುರ ವಾಸುದೇವ ಭಟ್ , ಪಾದೆಬೆಟ್ಟು ರಾಜೇಶ ಭಟ್ , ಜಿ ಬಾಲಕೃಷ್ಣ ಭಟ್ ಅನಂತ ಸಾಮಗ ವಾಸುದೇವ ಭಟ್ ವರದರಾಜ ಭಟ್ ಮೊದಲಾದವರು ಸಹಕರಿಸಿದರು .