ಉಡುಪಿ:ಕಲಾ ಪ್ರತಿಭೋತ್ಸವ : ಅರ್ಜಿ ಆಹ್ವಾನ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೊತ್ಸಾಹಿಸಲು ಬಾಲ ಪ್ರತಿಭೆ (8 ವರ್ಷ ದಿಂದ 14 ವರ್ಷದ ಒಳಗಿರುವ), ಕಿಶೋರ ಪ್ರತಿಭೆ (14 ವರ್ಷದಿಂದ 18 ವರ್ಷದೊಳಗಿರುವ) ಹಾಗೂ ಯುವಪ್ರತಿಭೆ (18 ವರ್ಷದಿಂದ 30 ವರ್ಷದ ಒಳಗಿರುವ) ಗಳಿಗೆ ಕಲಾಪ್ರತಿಭೋತ್ಸವವನ್ನು ಆಯೋಜಿಸಲಾಗಿದೆ.

ಜಿಲ್ಲಾ ಮಟ್ಟದ ಸ್ಪರ್ಧೆಯು ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡುವುದರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ವಲಯಮಟ್ಟಕ್ಕೆ, ವಲಯಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ತಾವು ವ್ಯಾಸಂಗ ಮಾಡುತ್ತಿರುವ ವಿದ್ಯಾ ಸಂಸ್ಥೆಯಿAದ ಪಡೆದು ಅರ್ಜಿಯ ಜೊತೆಗೆ (ಅರ್ಜಿಗೆ ನಿಗದಿತ ನಮೂನೆ ಇರುವುದಿಲ್ಲ: ಬಿಳಿ ಹಾಳೆಯಲ್ಲಿ ಸ್ವವಿವರಗಳನ್ನು ಬರೆದಿರಬೇಕು.) ಲಗತ್ತಿಸಬೇಕು. ಚಿತ್ರಕಲಾ ಸ್ಪರ್ಧಿಗಳು ತಮಗೆ ಬೇಕಾದ ಬಣ್ಣ ಇತ್ಯಾದಿಗಳನ್ನು ತಾವೇ ತರುವುದು. ನೃತ್ಯ ಪ್ರದರ್ಶನವನ್ನು ಲೈವ್ ಅಥವಾ ರೆಕಾರ್ಡ್ ಮೂಲಕ ಪ್ರದರ್ಶಿಸಬಹುದು (ಸ್ಪರ್ಧಿಗಳು ಪೆನ್ ಡ್ರೈವ್ ಅಥವಾ ಸಿ. ಡಿ.ಯನ್ನು ತಾವೇ ತರುವುದು, ಮೊಬೈಲ್‌ಗೆ ಜಾಕ್ ಸೌಲಭ್ಯವನ್ನು ಒದಗಿಸಲಾಗುವುದು). ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಒಬ್ಬರಿಗೆ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ.

ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಮೂಲಕ ಸ್ಪರ್ಧಿಗಳು ಅರ್ಜಿ ಸಲ್ಲಿಸುವಾಗ ಪ್ರತಿ ಪ್ರಕಾರ (ಸಂಗೀತ, ನೃತ್ಯ ಇತರೆ) ಹಾಗೂ ಪ್ರತಿ ವಿಭಾಗದ ಸ್ಪರ್ಧಿಗಳ ಜನ್ಮ ದಿನಾಂಕವನ್ನು ದೃಢೀಕರಿಸಿ, ಪಟ್ಟಿಯನ್ನು ಪ್ರತ್ಯೇಕವಾಗಿ ಕಳುಹಿಸಬೇಕು. ಖಾಸಗಿ ಸ್ಪರ್ಧಿಯಾಗಿದ್ದಲ್ಲಿ ಶಾಲಾ ಕಾಲೇಜಿನ ಜನ್ಮ ದಿನಾಂಕ ದೃಢೀಕರಣ ಪತ್ರ ಅಥವಾ ಪಂಚಾಯಿತಿ, ಪುರಸಭೆ, ನಗರಸಭೆಗಳಿಂದ ನೀಡುವ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ರಾಜ್ಯಮಟ್ಟದ ಸ್ಪರ್ಧಿಗಳಲ್ಲಿ ಪ್ರತಿ ಪ್ರಕಾರದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನವಾಗಿ ತಲಾ ರೂ. 15,000, ರೂ. 10,000, ರೂ. 7,500 ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಯುವ ಪ್ರತಿಭೆ ಸ್ಪರ್ಧೆಯ ಸಮೂಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಇರಬೇಕು ಮತ್ತು ಗರಿಷ್ಠ 15 ನ್ನು ಮೀರಬಾರದು.

ರಾಜ್ಯಮಟ್ಟದ ಅಂತಿಮ ಸಮೂಹ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ (ತಂಡಕ್ಕೆ) ಕ್ರಮವಾಗಿ ರೂ.50000, ರೂ.40000 ಹಾಗೂ ರೂ.30000 ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

ಬಾಲಪ್ರತಿಭೆ/ ಕಿಶೋರ ಪ್ರತಿಭೆ – ಏಕ ವ್ಯಕ್ತಿ ಸ್ಪರ್ಧೆಯ ಕಲಾ ಪ್ರಕಾರಗಳ ವಿವರ: ಶಾಸ್ತ್ರೀಯ ನೃತ್ಯ – 10 ನಿಮಿಷ, ಸುಗಮ ಸಂಗೀತ – 7 ನಿಮಿಷ, ಚಿತ್ರಕಲೆ -120 ನಿಮಿಷ, ಜನಪದ ಗೀತೆ -7 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ -7 ನಿಮಿಷ ಹಾಗೂ ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ.

ಯುವಪ್ರತಿಭೆ ಸ್ಪರ್ಧೆಯ ಏಕ ವ್ಯಕ್ತಿಯ ಕಲಾ ಪ್ರಕಾರಗಳ ವಿವರ : ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) – 7 ನಿಮಿಷ, ಶಾಸ್ತ್ರೀಯ ನೃತ್ಯ – 10 ನಿಮಿಷ, ಸುಗಮ ಸಂಗೀತ- 7 ನಿಮಿಷ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ, ಚಿತ್ರಕಲೆ -120 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ – 7 ನಿಮಿಷ ಹಾಗೂ ನಾಟಕ – 45 ನಿಮಿಷ.

ಮೇಲ್ಕಂಡ ಎಲ್ಲಾ ಸ್ಪರ್ಧೆಗಳಿಗೆ ಭಾಗವಹಿಸುವವರು ಅರ್ಜಿಯನ್ನು ಅಕ್ಟೋಬರ್ 30 ರ ಸಂಜೆ 5 ಗಂಟೆಯ ಒಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿ, ಡಾ.ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು ಗ್ರಾಮ, ಮಣಿಪಾಲ ಅಂಚೆ, ಉಡುಪಿ ಜಿಲ್ಲೆ, ಇವರಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 0820- 2986168 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.