ಹೈಕೋರ್ಟ್‌ ಆದೇಶ ಉಲ್ಲಂಘನೆ: ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ರೂ. ದಂಡ

ಚಿತ್ರದುರ್ಗ: ಹೈಕೋರ್ಟ್‌ ಆದೇಶ ಉಲ್ಲಂಘನೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​​ ಸಹ ಕಾರ್ಯದರ್ಶಿ ಶರಣ್ ಪಂಪ್​​ವೆಲ್​​ಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.

ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ, ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್‌ ಆದೇಶ ಹೊರಡಿಸಲಾಗಿದೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಸಿ ಶರಣ್ ಪಂಪ್​​ವೆಲ್​​ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು.

ಸೆ.13ರಂದು ಮಹಾಗಣಪತಿ ಶೋಭಾಯಾತ್ರೆ ವೇಳೆ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಅಂದು ಬೆಳಗ್ಗೆ 10:30 ರಿಂದ 12:30ರ ವರೆಗೆ ದರ್ಶನಕ್ಕೆ ಕೋರ್ಟ್‌ ಅವಕಾಶ ಕಲ್ಪಿಸಿತ್ತು. ಆದ್ರೆ ಪಂಪ್‌ವೆಲ್‌ 12:45ರ ವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇದರಿಂದ ಆದೇಶ ಉಲ್ಲಂಘನೆ ಬಗ್ಗೆ ಪೊಲೀಸರು ಹೈಕೋರ್ಟ್‌ ಗಮನಕ್ಕೆ ತಂದಿದ್ದರು. ಬಳಿಕ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿದೆ.