ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ದೇವರ ಸೇವಾಶುಲ್ಕ ಏರಿಕೆ ಮಾಡಲಾಗಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರ ದೇವಾಲಯಗಳಿದ್ದು, ಈ ದೇವಾಲಯಗಳ ಪೈಕಿ 9 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಅಕ್ಟೋಬರ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಕಳೆದ 4-5 ವರ್ಷದಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ, ಯಾವ ದೇವಾಲಯಗಳು ಸೇವಾಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದವೋ ಆ ದೇವಾಲಯಗಳ ಸೇವಾಶುಲ್ಕವನ್ನು, ಆಗಮ ಪಂಡಿತರ ಪರಿಶೀಲನೆ ನಂತರ 5-10% ವರೆಗೂ ಮುಜರಾಯಿ ಇಲಾಖೆ ಆಯುಕ್ತರು ಏರಿಕೆ ಮಾಡಿದ್ದಾರೆ. ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲವೆಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೇವಾ ಶುಲ್ಕ ಏರಿಕೆಯಾದ ದೇವಸ್ಥಾನಗಳು:
ಬೆಂಗಳೂರು ನಗರ:
- ಯೋಗ ನರಸಿಂಹಸ್ವಾಮಿ ದೇವಾಲಯ, ಮಲ್ಲೇಶ್ವರಂ
- ನಂದಿ ತೀರ್ಥ ದೇವಾಲಯ, ಮಲ್ಲೇಶ್ವರಂ
- ಮಹಾಗಣಪತಿ ದೇವಾಲಯ, ಮಲ್ಲೇಶ್ವರಂ
ಚಿಕ್ಕಬಳ್ಳಾಪುರ:
- ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ
- ವೆಂಕಟರಮಣ ದೇವಾಲಯ, ತಲಕಾಯ ಬೆಟ್ಟ
ದಕ್ಷಿಣ ಕನ್ನಡ:
- ಮಹಾಲಿಂಗೇಶ್ವರ ದೇವಾಲಯ, ಪುತ್ತೂರು
- ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
- ಸೌತಡ್ಕ ಮಹಾಗಣಪತಿ ದೇವಾಲಯ
- ಸೂರ್ಯನಾರಾಯಣ ಸ್ವಾಮಿ ದೇವಾಲಯ, ಮರೋಳಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಇದೀಗ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ 400 ರೂಪಾಯಿ, ಪರಿಷ್ಕೃತ ದರ 500 ರೂ.ಗೆ ಏರಿಕೆಯಾಗಿದೆ. ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಆದರೆ ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ಭಾರೀ ಹೆಚ್ಚಳ ಮಾಡಲಾಗಿದೆ.


















