ಆ.26ರಂದು ಮಣಿಪಾಲದಲ್ಲಿ “ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಉದ್ಘಾಟನೆ”

ಉಡುಪಿ: ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ (ಎಂಎಸ್‌ಡಿಸಿ), ವಿಷನ್ ಡಿಜಿಟಲ್ ಇಂಡಿಯಾ, ಇಂಟೆಲ್ ಮತ್ತು ಗ್ಲೋಬಲ್ ಎಐ ಸೊಸೈಟಿ ಸಹಯೋಗದಲ್ಲಿ ಇದೇ 26ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ ಸಭಾಂಗಣದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಎಂಎಸ್‌ಡಿಸಿ ಅಧ್ಯಕ್ಷ ಬ್ರಿಗೇಡಿಯ‌ರ್ ಸುರ್ಜಿತ್ ಪಾಬ್ಲಾ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಂ, ಇಂಟೆಲ್ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಸಿಯಾಂಗ್ ಬೂನ್ ನ್ಯೂ, ಅಮೆರಿಕದ ಯೂನಿವರ್ಸಿಟಿ ಆಫ್ ಸೌಥರ್ನ್ ಕ್ಯಾಲಿಫೋರ್ನಿಯಾದ ಉಂಬೆರ್ಟೊ ಸುಲ್ಪಾಸ್ಪೋ, ಏಷ್ಯಾ ಎಐ ಅಸೋಸಿಯೇಷನ್‌ ಅಧ್ಯಕ್ಷ ಎಲ್‌ ಕ್ವಾನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಾಹೆ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್‌, ಡಾ. ಟಿ.ಎಂ.ಎ. ಪೈ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ತೋನ್ಸೆ ಸಚಿನ್‌ ಪೈ ಉಪಸ್ಥಿತರಿರುವರು ಎಂದು ವಿವರಿಸಿದರು.
ಮಣಿಪಾಲವನ್ನು ಎಐ ಶಿಕ್ಷಣ, ಸಂಶೋಧನೆ ಮತ್ತು ಕೈಗಾರಿಕಾ ಸಹಭಾಗಿತ್ವದ ಕೇಂದ್ರವಾಗಿಸುವುದು, ಆಧುನಿಕ ಎಐ ಲ್ಯಾಬ್‌ಗಳು, ಡಿಜಿಟಲ್ ಕ್ಲಾಸ್‌ರೂಮ್‌ಗಳು, ಕೈಗಾರಿಕೆ ಆಧರಿತ ಪಠ್ಯಕ್ರಮ, ಜಾಗತಿಕ ಸಹಭಾಗಿತ್ವ ಈ ಎಐ ಶ್ರೇಷ್ಠತಾ ಕೇಂದ್ರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಎಐ, ಎಐ ವೀಲ್ಸ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪುವ ಸಮಾವೇಶಿತ ಶಿಕ್ಷಣದ ಗುರಿಯನ್ನು ಹೊಂದಲಾಗಿದೆ ಎಂದೂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಮಾರಮ್, ರಾಜಲಕ್ಷ್ಮಿ, ಅಂಜಯ್ಯ ಉಪಸ್ಥಿತರಿದ್ದರು.