ಉಡುಪಿ:ಯಾವುದೇ ಒಂದು ಪ್ರಶ್ನೆಗೆ ಕನಿಷ್ಠ ಸಮಯದಲ್ಲಿ ಅತಿ ಸೂಕ್ತ ಉತ್ತರವನ್ನು , ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಅಂತಹ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಬಹುದು. ಅದಕ್ಕೆ ಸಿದ್ಧತೆ ನಡೆಸುವುದು ಅತಿ ಮುಖ್ಯ. ಅದು ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಹಂತದ ವಿದ್ಯಾಭ್ಯಾಸದ ಜೊತೆ ಜೊತೆಗೆ ನಡೆಯಬೇಕು. ಪದವಿ ಪಡೆದ ನಂತರ ಅದು ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ನಡೆದಾಗ ಯಶಸ್ಸು ಪಡೆಯಬಹುದು. ಕೇವಲ ಪುಸ್ತಕ ಓದಿದ್ರೆ ಮಾತ್ರ ಸಾಧ್ಯವಾಗುವುದಿಲ್ಲ ಯೋಚನೆ ಮಾಡುವ ಶಕ್ತಿ ಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಹೆಚ್ ರಾಜೇಶ್ ಪ್ರಸಾದ್ ಹೇಳಿದರು.
ಅವರು ಎಸ್.ವಿ.ಟಿ ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿ “ಮೌಲ್ಯ ಸಂಗಮ” ವರ್ಷದ ಸರಣಿ ಕಾರ್ಯಕ್ರಮದಡಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ವಿ ಎಜುಕೇಶನ್ ಟ್ರಸ್ಟಿನ ಕೋಶಾಧಿಕಾರಿ ಐ ರವೀಂದ್ರನಾಥ ಪೈ , ಉಡುಪಿ ಜಿಲ್ಲಾ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ (ಭಾರತೀಯ ಮಾನವ ಹಕ್ಕುಗಳ ಫೆಡರೇಷನ್) ಅಧ್ಯಕ್ಷರಾದ ಉದಯ ನಾಯ್ಕ್ , ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ, ಪ್ರೌಢಶಾಲೆ ವಿಭಾಗದ ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್ ಮತ್ತು ಕಾಲೇಜಿನ ಉಪನ್ಯಾಸಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್ ವಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಕೆ ಪಿ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಪ್ರತೀಕ್ಷಾ ಆರ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಪ್ರಭಾತ್ ರಂಜನ್ ನಿರೂಪಿಸಿದರು.












