ರಾಜ್ಯ ಶಿಕ್ಷಣ ನೀತಿ ಶೀಘ್ರದಲ್ಲೇ ಅನುಷ್ಠಾನ: ಸಚಿವ ಮಧು ಬಂಗಾರಪ್ಪ

ಹುಬ್ಬಳ್ಳಿ : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಅವಕಾಶ ಇಲ್ಲ. ರಾಜ್ಯ ಶಿಕ್ಷಣ ನೀತಿಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರನ್ನು ದ್ವೇಷಿಸುವ ಪಠ್ಯ ನಮಗೆ ಬೇಡ. ದೇಶದ ಬಗ್ಗೆ ಒಳ್ಳೆಯತನ ಹೇಳುವ ಪಠ್ಯ ಬೇಕು. ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಹೇಳಿದ್ದೆವು. ಅದರಂತೆ ಪಠ್ಯ ಪರಿಷ್ಕರಿಸಲಾಗುವುದು ಎಂದರು.

ಎನ್‌ಇಪಿಯಲ್ಲಿ ಪಠ್ಯ ರಚನೆಯ ಹಿಡಿತ ಬೇರೆಯವರ ಕೈಗೆ ಹೋಗುತ್ತದೆ. ಕೇಂದ್ರದ ಕೈಗೆ ಕೊಟ್ಟರೆ ಅವರು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುತ್ತಾರೆ. ಇದರಿಂದ ಕುವೆಂಪು, ನಮ್ಮಲ್ಲಿನ ಚರಿತ್ರೆ ಬದಿಗೆ ಸರಿಯುತ್ತದೆ. ನಾವು ಯುಪಿ ಮತ್ತು ಇತರ ರಾಜ್ಯದ ಚರಿತ್ರೆ ಓದಬೇಕಾಗುತ್ತದೆ. ಇದನ್ನು ಹತೋಟಿಗೆ ತರುವ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.