ವೈಯಕ್ತಿಕ ದ್ವೇಷ: ಅಣ್ಣನ ಮಕ್ಕಳನ್ನು ಕಬ್ಬಿಣದ ಸಲಾಕೆಯಿಂದ ಭೀಕರವಾಗಿ ಹತ್ಯೆಗೈದ ವ್ಯಕ್ತಿ.

ಬೆಂಗಳೂರು: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ, ವ್ಯಕ್ತಿಯೊಬ್ಬ ತನ್ನ ಅಣ್ಣನ ಇಬ್ಬರು ಮಕ್ಕಳನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ಕೊಂದಿರುವ ಘಟನೆ ಶನಿವಾರ ನಡೆದಿದೆ.

ಕಮ್ಮಸಂದ್ರದ ಚಾಂದ್ ಪಾಷ ದಂಪತಿ ಮಕ್ಕಳಾದ ಜುನೈದ್ (8) ಹಾಗೂ ಇಶಾಕ್‌ (6) ಮೃತ ದುರ್ದೈವಿಗಳು.

ಇನ್ನು ಹಲ್ಲೆಗೊಳಗಾಗಿದ್ದ ಮತ್ತೊಬ್ಬ ಬಾಲಕ ರೋಹನ್‌ (4) ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಈ ಅವಳಿ ಮಕ್ಕಳ ಕೊಂದ ಆರೋಪಿ ಕಾಸಿಮ್ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ.

ಸೋದರನ ಮಕ್ಕಳ ಮೇಲೆ ಭೀಕರ ಹಲ್ಲೆ:
ಮನೆಯಲ್ಲಿ ಯಾರು ಇಲ್ಲದ ವೇಳೆ ಅಣ್ಣನ ಮಕ್ಕಳ ಮೇಲೆ ಕಾಸಿಮ್‌ ಭೀಕರ ಹಲ್ಲೆ ನಡೆಸಿದ್ದಾನೆ. ಕೆಲ ಹೊತ್ತಿನ ಬಳಿಕ ಮೃತ ಮಕ್ಕಳ ಅಜ್ಜಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕುರ್ಕುಂದಿ ಗ್ರಾಮದ ಚಾಂದ ಪಾಷ ಅವರು ಹಲವು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದರು. ಬಳಿಕ ಕಮ್ಮಸಂದ್ರದ ಬಳಿ ತಮ್ಮ ಮೂವರು ಮಕ್ಕಳು, ಪತ್ನಿ, ತಾಯಿ ಹಾಗೂ ಸೋದರ ಕಾಸಿಮ್ ಜತೆ ಅವರು ನೆಲೆಸಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಚಾಂದ್ ಗಾರೆ ಕೆಲಸಗಾರನಾಗಿದ್ದರೆ, ಗಾರ್ಮೆಂಟ್ಸ್‌ನಲ್ಲಿ ಆತನ ಪತ್ನಿ ದುಡಿಯುತ್ತಿದ್ದರು. ಹೀಗೆ ಬೆವರು ಸುರಿಸಿ ಅವರು ಬದುಕು ಕಟ್ಟಿಕೊಂಡಿದ್ದರು.

ಹೀಗಿರುವಾಗ ಅವರ ಚೆಂದದ ಬಾಳಿಗೆ ತಮ್ಮನೇ ಶತ್ರುವಾಗಿ ಕಾಡಿದ್ದಾನೆ. ತನ್ನನ್ನು ಅಣ್ಣ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಕಾಸಿಮ್ ದ್ವೇಷ ಕಾರುತ್ತಿದ್ದ. ಕೆಲಸವಿಲ್ಲದೆ ಅಂಡಲೆಯುತ್ತಿದ್ದ ಆತ ಪದೇ ಪದೇ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ. ಈ ಕಿರಿಕಿರಿ ಇದ್ದರೂ ತಮ್ಮನನ್ನು ಮನೆಯಿಂದ ಚಾಂದ್ ಪಾಷ ಹೊರ ಹಾಕಿರಲಿಲ್ಲ. ಇದೇ ಹಗೆತನದಿಂದ ಆತ ಶನಿವಾರ ಸೋದರನ ಮಕ್ಕಳ ಮೇಲೆ ಹಗೆ ತೀರಿಸಿದ್ದಾನೆ.