ಭಾರತದ ಮುಂದಿನ‌ ಭವಿಷ್ಯ ಇಂದಿನ ವಿದ್ಯಾರ್ಥಿಗಳ‌ ಮೇಲಿದೆ: ಶಾಸಕ ಕಾಮತ್

ಮಂಗಳೂರು: 2018-19ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಂಯೋಜನೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನವಾಗಿ ಸರಕಾರ ಕೊಡಮಾಡುವ ಲ್ಯಾಪ್‌ಟಾಪ್‌ಗಳನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಯುವ ಶಕ್ತಿ ಈ ದೇಶದ ಸಂಪತ್ತು. ಭಾರತದ ಮುಂದಿನ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ಇಂದಿನ ಯುವ ಸಮುದಾಯ ಸರಿಯಾದ ಮಾರ್ಗದಲ್ಲಿ ಕ್ರಮಿಸಿದರೆ ಭಾರತದ ಉನ್ನತಿಗೆ ಒಂದು ಅದ್ಭುತ ಶಕ್ತಿ ಸಿಗಬಹುದು ಎಂದು‌ ಅಭಿಪ್ರಾಯಪಟ್ಟರು.
ಅದೆಷ್ಟೋ ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಷ್ಟಗಳನ್ನು ಅನುಭವಿಸುತ್ತಾರೆ. ಶಿಕ್ಷಕರು ಒಬ್ಬ ವಿದ್ಯಾರ್ಥಿಯನ್ನು ಸತ್ಪ್ರಜೆಯನ್ನಾಗಿಸಲು ಬಹಳಷ್ಟು ಶ್ರಮ ಪಡುತ್ತಾರೆ. ಹಾಗಾಗಿ ಪೋಷಕರ ಮತ್ತು ಶಿಕ್ಷಕರ ಪರಿಶ್ರಮ ಮತ್ತು ತ್ಯಾಗವನ್ನು ಕಡೆಗಣಿಸದೆ ಅವರನ್ನು ಗೌರವಿಸುವ ಕಾರ್ಯಗಳು ಆಗಬೇಕಿದೆ. ವಿಧ್ಯಾರ್ಥಿಗಳ ಗುರಿ ಸಾಧನೆಯ ಔನ್ನತ್ಯದ ಕಡೆಗೆ ಅಚಲವಾಗಿರಲಿ ಎಂದು ನುಡಿದರು.
ಇದೇ ವೇಳೆ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರಕ್ಷಿತಾ, ರಾಧಿಕ, ಮಂಜುನಾಥ, ಶಿವಲಿಂಗಪ್ಪ, ವಾಣಿಜ್ಯ ವಿಭಾಗದ ಕುಮಾರಿ ಸಂಗೀತ, ಚೇತನ್, ಹರ್ಷಿತ ಕುಮಾರಿ‌ ಮತ್ತು ವಿಜ್ಞಾನ ವಿಭಾಗದ ಕುಮಾರಿ ಜ್ಯೋತಿ ಕೆ., ಧನುಷ್, ತೇಜಸ್ವಿ ಇವರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಶಾಸಕರು ವಿತರಿಸಿದರು‌.
ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಕಾಮತ್, ಸುಕುಮಾರ್, ರಾಘವೇಂದ್ರ ರಾವ್, ಸುರೇಶ್, ಮಂಜುನಾಥ್, ರಥಬೀದಿ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಮೂರ್ತಿ, ದ.ಕ ಪದವಿಪೂರ್ವ ಕಾಲೇಜು ಪ್ರಿನ್ಸಿಪಲ್ ಅಸೋಸಿಯೇಷನ್ ಇದರ ಅಧ್ಯಕ್ಷ ಉಮೇಶ್ ಕರ್ಕೇರ, ವಿಧ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸರೋಜಿನಿ ಆಚಾರ್ ಕಾರ್ಯಕ್ರಮ ನಿರೂಪಿಸಿದರು.