ಮೀನುಗಾರರ ಸಾಲ ಮರುಪಾವತಿಗೆ ಬ್ಯಾಂಕುಗಳು ಒತ್ತಾಯಿಸುವಂತಿಲ್ಲ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಮೀನುಗಾರರ ಸಾಲ ಮನ್ನಾ ಯೋಜನೆಯಡಿ ಯಲ್ಲಿ 2017-18 ಮತ್ತು 2018-19  ಸಾಲಿನಲ್ಲಿ  ಮೀನುಗಾರರಿಗೆ, ರಾಷ್ಟ್ರೀಕೃತ  ಬ್ಯಾಂಕುಗಳು , ಪ್ರಾದೇಶಿಕ ಬ್ಯಾಂಕುಗಳು ಶೇ 2, ಶೇ 3 ಹಾಗೂ ಶೂನ್ಯ ಬಡ್ಡಿದರದಲ್ಲಿ ವಿತರಿಸುವ  ಸಾಲುಗಳು  ಮನ್ನಾ ಆಗಲಿದ್ದು,   ಆರ್ಹ ಫಲಾನುಭವಿಗಳಿಗೆ ಸಾಲ ಮರು ಪಾವತಿಗಾಗಿ ಬ್ಯಾಂಕ್‍ಗಳಿಂದ ಯಾವುದೇ ಒತ್ತಡ ಹೇರುವಂತಿಲ್ಲಾ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಗುರುವಾರ ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ನಡೆದ ಮೀನುಗಾರರ ಸಾಲ ಮನ್ನಾ ಕುರಿತು ಅಧಿಕಾರಿಗಳು ಮತ್ತು ಮೀನುಗಾರಿಕಾ ಸಂಘಗಳೊಂದಿಗೆ  ನಡೆದ ಸಭೆಯಲ್ಲಿ ಮಾತನಾಡಿ,  2017-18 ಮತ್ತು 2018-19  ಸಾಲಿನಲ್ಲಿ  ಮೀನುಗಾರರಿಗೆ ನೀಡಲಾದ 50,000 ರೂ.ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು,  ಸಾಲ ಮರು ಪಾವತಿಗಾಗಿ ಬ್ಯಾಂಕ್‍ಗಳಿಂದ ಒತ್ತಡ ಬರುತ್ತಿದೆ ಎಂದು  ಮೀನುಗಾರರು ತಿಳಿಸಿದ್ದು, ಈ ಬಗ್ಗೆ ತಿಳಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸಚಿವರು ಸೂಚಿಸಿದರು.

 

ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರುದ್ರೇಶ್ ಮಾತನಾಡಿ, ಈ ಬಗ್ಗೆ ತಮಗೆ ಸಹ ದೂರು ಬಂದಿದ್ದು, ಮೀನುಗಾರರ ಸಾಲ ಮನ್ನಾ ಫಲಾನುಭವಿಗಳಿಗೆ ಸಾಲ ಪಾವತಿಸುವಂತೆ ಒತ್ತಡ ಹೇರದಂತೆ ಸಂಬಂದಪಟ್ಟ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಅಲ್ಲದೇ ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ಬರುವ ಫಲಾನುಭವಿಗಳು ಏಪ್ರಿಲ್ 2019 ರಿಂದ ಸಾಲ ಮರು ಪಾವತಿಸಿದ್ದಲ್ಲಿ ಸದ್ರಿ ಮೊತ್ತ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಹಾಗೂ ಒಂದು ಕುಟುಂಬದಲ್ಲಿ ಒಬ್ಬ ಫಲಾನುಭವಿ ಮಾತ್ರ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ ಆದರೆ  ಮೀನುಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲ ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಸಂಘದ ಅಧ್ಯಕ್ಷ ಯಶ್ ಪಾಲ್ ಸುವರ್ಣ ಸ್ವಾಗತಿಸಿದರು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ,ಜಿಲ್ಲಾಧಿಕಾರಿ ಜಿ. ಜಗದೀಶ್, ಮೀನುಗಾರಿಕಾ ಫೆಡರೇಷನ್ ವ್ಯವಸ್ಥಾಪಕ ನಿರ್ದೇಶಕ ಹರೀಶ್‍ಕುಮಾರ್, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಗಣೇಶ್,  ಪಾಶ್ವನಾಥ್ , ಸಹಕಾರ ಇಲಾಖೆಯ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.