ಸರಕಾರ-ಸಂಘ ಸಂಸ್ಥೆಯ ಸಹಕಾರದಿಂದ ಅಂಗನವಾಡಿಯ ಅಭಿವೃದ್ಧಿ: ಮಂಜುನಾಥ್ 

ಉಡುಪಿ: ಸರ್ಕಾರ ನೀಡುವ ಸೌಲಭ್ಯದ ಜತೆಗೆ ಸಂಘ ಸಂಸ್ಥೆಗಳು ಸಹ ಸಹಕಾರ ನೀಡಿದಲ್ಲಿ ಅಂಗನವಾಡಿ‌ ಕೇಂದ್ರಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬಹುದು ಎಂದು ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ ಹೇಳಿದರು.
ಬಾಲವಿಕಾಸ ಸಮಿತಿ, ರೋಟರಿ ಕ್ಲಬ್‌ ಉಡುಪಿ ರಾಯಲ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ, ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌, ಸಹಕಾರ ಭಾರತಿ ಸಹಯೋಗದಲ್ಲಿ ಮಣಿಪಾಲ ಈಶ್ವರನಗರ ವಾರ್ಡ್‌ನ ಆದರ್ಶ ನಗರ-ದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಸ್ತನ್ಯಪಾನ ಮತ್ತು ಪೋಷಕಾಂಶ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಂಗನವಾಡಿಯಿಂದಲೇ ಮಕ್ಕಳ ಬೆಳವಣಿಗೆ, ಪೋಷಕಾಂಶಯುತ ಆಹಾರ ಹಾಗೂ ಸ್ತನ್ಯಪಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.
ರಾಯಲ್‌ ಅಧ್ಯಕ್ಷ ಬಿ.ಕೆ. ಯಶವಂತ ಕಾರ್ಯಕ್ರಮ ಉದ್ಘಾಟಿಸಿದರು.
ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌ನ ಪ್ರಾಧ್ಯಾಪಕಿ ಮಂಜುಳಾ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸಹಕಾರ ಭಾರತಿ ಅಧ್ಯಕ್ಷ ದಿನೇಶ್‌ ಹೆಗ್ಡೆ ಆತ್ರಾಡಿ, ಎಂಐಟಿ ಉಪನ್ಯಾಸಕ ಬಾಲಕೃಷ್ಣ ಮದ್ದೋಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಿಯಾ ನಾಯರ್‌, ಮಾಹೆ ಹಿರಿಯ ಅಧಿಕಾರಿ ಕೆ.ಎಸ್‌. ಜೈವಿಠಲ್‌, ಮಣಿಪಾಲ ಆಟೊ ಚಾಲಕ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಸುಬ್ರಾಯ ಆಚಾರ್‌, ಸುಧಾಮ ಮಣಿಪಾಲ ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ಎನ್‌. ಲಲಿತಾ ಸ್ವಾಗತಿಸಿ, ಎನ್‌. ಸತೀಶ್‌ ಕಾರ್ಯಕ್ರಮ ನಿರೂಪಿಸಿದರು.