ಉಡುಪಿ: ಉಡುಪಿ ಜಿಲ್ಲಾ ಚಿಲ್ಡ್ರೆನ್ ಇಸ್ಲಾಮಿಕ್ ಆರ್ಗನೈಸೇಶನ್ “ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” ಎಂಬ ಶೀರ್ಷಿಕೆಯೊಂದಿಗೆ ಒಂದು ಕಾಲ ‘ಹಸಿರು ಅಭಿಯಾನ’ವನ್ನು ಹಮ್ಮಿಕೊಂಡಿದ್ದು, ಹೂಡೆಯ ಸಾಲಿಹಾತ್ ಎಜ್ಯುಕೇಶನಲ್ ಟ್ರಸ್ಟ್ ನಲ್ಲಿ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಅರ್ಫಾ ಕಾರ್ಕಳ, ಮುಹಮ್ಮದ್ ರಫಾನ್ ಬೆಂಗ್ರೆ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿ ಮಗುವಿಗೆ ಒಂದು ಗಿಡ ಎಂಬಂತೆ ಜಿಲ್ಲೆಯಲ್ಲಿ 5 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಶಾಲೆ, ಮದ್ರಸಾ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡಲಾಗುವುದು. ಆ ಮೂಲಕ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಈ ಅಭಿಯಾನ ಪೂರಕವಾಗಲಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲು ಚಿತ್ರಕಲೆ, ಪ್ರಬಂಧ, ಕವನ ಮತ್ತು ಸಾಮಾಜಿಕ ಮಾಧ್ಯಮ ರೀಲ್ಸ್ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುವುದು. ಉಡುಪಿ ದೊಡ್ಡನಗುಡ್ಡೆಯ ಕೃಷಿ ಇಲಾಖೆಯಲ್ಲಿ ಇಕೋ ಫ್ರೆಂಡ್ಲಿ ಗಾರ್ಡೆನಿಂಗ್ ವರ್ಕ್ ಶಾಪ್ ನಡೆಯಲಿದೆ.
25 ಕಡೆಗಳಲ್ಲಿ ಪಾರ್ಕ್, ಶಾಲಾ ಆವರಣ, ಮದ್ರಸಾ ಕ್ಯಾಂಪಸ್, ಮಸೀದಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಗಿಡಗಳನ್ನು ನೆಡಲಾಗುವುದು. 5,000 ಮನೆಗಳಿಗೆ ಸಿಐಒ ಕಾರ್ಯಕರ್ತರು ಭೇಟಿ ನೀಡಿ ಪರಿಸರದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಉಡುಪಿ ನಗರ, ಮಲ್ಪೆ, ಹೂಡೆ, ತೋನ್ಸೆ, ಕಾಪು, ಕಟಪಾಡಿ, ಉದ್ಯಾವರ, ಕುಕ್ಕಿಕಟ್ಟೆ, ಕುಂದಾಪುರ, ಮಾವಿನಕಟ್ಟೆ,, ಗಂಗೊಳ್ಳಿ, ಶಿರೂರು, ಕಾರ್ಕಳ ಸೇರಿದಂತೆ ಕನಿಷ್ಠ 20 ಸ್ಥಳಗಳಲ್ಲಿ ಪರಿಸರ ಜಾಗೃತಿ ಕುರಿತ ರ್ಯಾಲಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜುಲೈ 27ರಂದು ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಅಭಿಯಾನದ ಪರಿಣಾಮಗಳ ಬಗ್ಗೆ ಚರ್ಚೆ, ವಿಜೇತರಿಗೆ ಬಹುಮಾನ ವಿತರಣಾ, ಧಾರ್ಮಿಕ ಮತ್ತು ನಾಗರಿಕ ನಾಯಕರು ಸಂದೇಶ ನೀಡಲಿದ್ದಾರೆ. ಅಭಿಯಾನದ ಅಂತ್ಯ ಭಾಗವಾಗಿ ವಿದ್ಯಾರ್ಥಿಗಳು ಆ.3ರಂದು ಆಳ್ವಾಸ್ ಆಯುರ್ವೇದಿಕ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.ಹುಮೆರಾ ಕಾರ್ಕಳ ಉಪಸ್ಥಿತರಿದ್ದರು.












